ಕೋಲ್ಕತ್ತ: ಪಶ್ಚಿಮ ಬಂಗಾಳದ ಕೋಲ್ಕತ್ತದ ಮೆಟ್ರೊ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಆ. 22ರಂದು ಚಾಲನೆ ನೀಡಲಿದ್ದು, ಇದಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೈರಾಗುವ ಸಾಧ್ಯತೆಗಳಿವೆ.
ಮೆಟ್ರೊ ಯೋಜನೆಗಳನ್ನು ಮಮತಾ ಬ್ಯಾನರ್ಜಿ ಅವರು ರೈಲ್ವೆ ಸಚಿವರಾಗಿದ್ದಾಗ ಯೋಜಿಸಿ ಹಣಕಾಸು ಒದಗಿಸಿದ್ದರು. ಆದರೆ ಬಿಜೆಪಿ ಈಗ ಚುನಾವಣೆಗೆ ಮುನ್ನ ಇವುಗಳನ್ನು ಉದ್ಘಾಟಿಸಿ ಲಾಭ ಪಡೆಯುತ್ತಿದೆ. ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಪತ್ರದ ಮೂಲಕ ಮೆಟ್ರೊ ಯೋಜನೆ ಉದ್ಘಾಟನೆ ಆಹ್ವಾನ ನೀಡಿದ್ದಾರೆಂದು ಅಲ್ಲಿನ ಅಧಿಕಾರಿ ಹೇಳಿದ್ದಾರೆ.
ಅಷ್ಟೇ ಅಲ್ಲದೆ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳದಿಂದ ವಲಸೆ ಬಂದವರ ಮೇಲೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರದ ಬೆಂಬಲವಿದೆ ಎಂದು ಹೇಳಲಾಗಿದೆ.
ಬಂಗಾಳಿ ವಲಸಿಗರ ಮೇಲೆ ಇಂತಹ ತಾರತಮ್ಯದ ವರ್ತನೆಯನ್ನು ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ವೇದಿಕೆಯನ್ನು ಹಂಚಿಕೊಳ್ಳಲು ಬಯಸುವುದಿಲ್ಲ ಎಂದು ಉನ್ನತ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.
ಕೋಲ್ಕತ್ತದಲ್ಲಿ ಆಗಸ್ಟ್ 22 ರಂದು ಮೋದಿ ಅವರು ಹಸಿರು ಮಾರ್ಗದ ಎಸ್ಪ್ಲೆನೆಡ್ – ಸಿಯಾಲದ್ ವಿಭಾಗ, ಕಿತ್ತಳೆ ಮಾರ್ಗದ ಹೇಮಂತ ಮುಖೋಪಾಧ್ಯಾಯ (ರೂಬಿ ಕ್ರಾಸಿಂಗ್)-ಬೆಲೆಘಾಟಾ ವಿಭಾಗ ಮತ್ತು ಹಳದಿ ಮಾರ್ಗದ ನೊವಾಪರಾ-ಜೈ ಹಿಂದ್ ಬಿಮಾನ್ಬಂದರ್ ಮೆಟ್ರೊ ವಿಭಾಗವನ್ನು ಉದ್ಘಾಟಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.