ADVERTISEMENT

ಗಡಿ ವಿವಾದ: ಕರ್ನಾಟಕದ ಜೊತೆ ಚರ್ಚಿಸಲು ರಾಜ್ಯಪಾಲರಿಗೆ ಶಿವಸೇನೆ ಆಗ್ರಹ

ಪಿಟಿಐ
Published 2 ನವೆಂಬರ್ 2020, 9:38 IST
Last Updated 2 ನವೆಂಬರ್ 2020, 9:38 IST
ಶಿವಸೇನೆ ಲಾಂಛನ
ಶಿವಸೇನೆ ಲಾಂಛನ   

ಮುಂಬೈ: ‘ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಮೇಲೆ ‘ದೌರ್ಜನ್ಯ’ ಎಸಗಲಾಗುತ್ತಿದೆ ಎಂಬ ಕುರಿತು ಕರ್ನಾಟಕದ ರಾಜ್ಯಪಾಲರ ಜೊತೆಗೆ ಕಟುಶಬ್ದಗಳಲ್ಲಿ ಚರ್ಚಿಸಬೇಕು’ ಎಂದು ಶಿವಸೇನೆ ಮಹಾರಾಷ್ಟ್ರದ ರಾಜ್ಯಪಾಲರಿಗೆ ಆಗ್ರಹಪಡಿಸಿದೆ.

ತನ್ನ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಶಿವಸೇನೆ, ‘ಸೂರ್ಯ –ಚಂದ್ರ ಇರುವವರೆಗೂ ಬೆಳಗಾವಿ ಕರ್ನಾಟಕದ ಭಾಗ’ ಎಂಬ ಕರ್ನಾಟಕದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಹೇಳಿಕೆ ಉಲ್ಲೇಖಿಸಿ ತರಾಟೆಗೆ ತೆಗೆದುಕೊಂಡಿದೆ.

‘ಬೆಳಗಾವಿ, ಇತರೆ ಗಡಿ ಪ್ರದೇಶ ಕುರಿತಂತೆ ಕರ್ನಾಟಕ –ಮಹಾರಾಷ್ಟ್ರ ನಡುವಣ ವಿವಾದ ಸದ್ಯ ಸುಪ್ರೀಂ ಕೋರ್ಟ್‌ನಲ್ಲಿದೆ. ಆಗಸದಲ್ಲಿ ಸೂರ್ಯ, ಚಂದ್ರ ಇದೆಯೋ ಎಂಬುದನ್ನು ನೋಡಿ ಕೋರ್ಟ್ ಆದೇಶಿಸುವುದಿಲ್ಲ’ ಎಂದು ಶಿವಸೇನೆ ಹೇಳಿದೆ.

ADVERTISEMENT

ಮರಾಠಿ ಭಾಷಿಕರ ಮೇಲೆ ಈ ಭಾಗದಲ್ಲಿ ಕಳೆದ 60 ವರ್ಷಗಳಿಂದ ದೌರ್ಜನ್ಯ ನಡೆಯುತ್ತಿದೆ. ಕರ್ನಾಟಕ ಇದನ್ನು ನಿಭಾಯಿಸುತ್ತಿರುವ ಕ್ರಮ ಈ ಜನರಲ್ಲಿ ಆಕ್ರೋಶ ಮೂಡಿಸಿದೆ ಎಂದು ಶಿವಸೇನೆ ಸಂಪಾದಕೀಯದಲ್ಲಿ ಆರೋಪಿಸಿದೆ.

ಬೆಳಗಾವಿಯಲ್ಲಿರುವ ಮರಾಠಿ ಭಾಷಿಕರನ್ನು ಬೆಂಬಲಿಸಿ ಮಹಾರಾಷ್ಟ್ರದ ಸಚಿವರು ರಾಜ್ಯೋತ್ಸವ ದಿನವಾಗಿದ್ದ ಭಾನುವಾರ ಕಪ್ಪುಪಟ್ಟಿಯನ್ನು ಧರಿಸಿ ಕರಾಳ ದಿನ ಆಚರಣೆಯನ್ನು ಬೆಂಬಲಿಸಿದ್ದರು.

ಮಹಾರಾಷ್ಟ್ರ ರಾಜ್ಯಪಾಲರು ಈ ಕುರಿತು ಕರ್ನಾಟಕ ರಾಜ್ಯಪಾಲರ ಜೊತೆಗೆ ಚರ್ಚಿಸಬೇಕು. ಕನಿಷ್ಠ ಬೆಳಗಾವಿಯ ನಿಯೋಗ ಪ್ರಧಾನಿಯನ್ನು ಭೇಟಿ ಮಾಡಲು ಸಮಯಾವಕಾಶ ನಿಗದಿಪಡಿಸಲಾದರೂ ನೆರವು ನೀಡಬೇಕು ಎಂದು ಒತ್ತಾಯಿಸಿದೆ.

ಕರ್ನಾಟಕದ ಲಕ್ಷಾಂತರ ಜನರು ಮಹಾರಾಷ್ಟ್ರದಲ್ಲಿ ಉದ್ಯಮ, ವ್ಯಾಪಾರ ನಡೆಸುತ್ತಾ ಸಂತೋಷದಿಂದ ಜೀವಿಸುತ್ತಿದ್ದಾರೆ ಎಂಬುದನ್ನು ಲಕ್ಷ್ಮಣ ಸವದಿ ಅವರಂಥ ಸಚಿವರು ಮರೆಯಬಾರದು ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.