ನವದೆಹಲಿ: ಹರಿಯಾಣದಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಶಾಸಕ ಕುಲದೀಪ್ ಬಿಷ್ಣೋಯಿ ಅವರನ್ನು ಪಕ್ಷದಿಂದ ಅಮಾನತು ಮಾಡುವುದಾಗಿ ಕಾಂಗ್ರೆಸ್ ಘೋಷಿಸಿದೆ.
ಕುಲದೀಪ್ ಬಿಷ್ಣೋಯಿ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ವಿಶೇಷ ಆಹ್ವಾನಿತ) ಸ್ಥಾನದಿಂದ ತೆರವುಗೊಳಿಸಲಾಗುವುದು. ಪಕ್ಷದಿಂದಲೂ ಅಮಾನತುಗೊಳಿಸಲಾಗುವುದು. ಅವರ ಸದಸ್ಯತ್ವ ರದ್ದುಗೊಳಿಸುವಂತೆ ವಿಧಾನಸಭೆ ಸ್ಪೀಕರ್ ಅವರಿಗೂ ಪತ್ರ ಬರೆಯಲಾಗುವುದು ಎಂದು ಕಾಂಗ್ರೆಸ್ ಮೂಲಗಳ ಹೇಳಿಕೆ ಉಲ್ಲೇಖಿಸಿ ‘ಎಎನ್ಐ’ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.
ಹರಿಯಾಣದಲ್ಲಿ ಮತದಾನದ ನಿಯಮ ಉಲ್ಲಂಘನೆಯಾಗಿರುವುದಾಗಿ ಬಿಜೆಪಿ ಆರೋಪಿಸಿತ್ತು. ಪರಿಣಾಮವಾಗಿ ಮತ ಎಣಿಕೆ ಪ್ರಕ್ರಿಯೆಯನ್ನು ನಿಲ್ಲಿಸಲಾಗಿತ್ತು. ಆರಂಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಜಯ್ ಮಾಕೆನ್ ಗೆಲುವನ್ನು ಘೋಷಣೆ ಮಾಡಲಾಗಿತ್ತು. ಆದರೆ ಬಳಿಕ ಒಂದು ಮತ ರದ್ದಾಗಿದ್ದು, ಅವರಿಗೆ ಸೋಲಾಗಿತ್ತು. ಬಿಜೆಪಿ ಮತ್ತು ಅದರ ಮಿತ್ರ ಪಕ್ಷವಾದ ಜನನಾಯಕ್ ಜನತಾ ಪಕ್ಷದ ಬೆಂಬಲದೊಂದಿಗೆ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಮಾಧ್ಯಮ ಸಂಸ್ಥೆ ಮಾಲೀಕ ಕಾರ್ತಿಕೇಯ ಶರ್ಮಾ ಅವರು ಮಾಕೆನ್ ವಿರುದ್ಧ ಗೆದ್ದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.