ನವದೆಹಲಿ:ಪೂರ್ವ ಲಡಾಖ್ ಗಡಿಯಲ್ಲಿ ಘರ್ಷಣೆ ಸಂಭವಿಸಿದ ಎಲ್ಲ ಪ್ರದೇಶಗಳಿಂದ ಚೀನಾ ಮತ್ತು ಭಾರತದ ಸೈನಿಕರು ಹಿಂದೆಸರಿಯುವುದಕ್ಕೆ ಮಾರ್ಗಸೂಚಿಯನ್ನು ರಚಿಸುವ ಉದ್ದೇಶದೊಂದಿಗೆ, ಭಾರತ–ಚೀನಾ ಸೇನೆಯ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಎಂಟನೇ ಸುತ್ತಿನ ಮಾತುಕತೆ ಶುಕ್ರವಾರ ನಡೆಯಿತು ಎಂದು ಮೂಲಗಳು ತಿಳಿಸಿವೆ.
ಪೂರ್ವ ಲಡಾಖ್ನ ವಾಸ್ತವ ನಿಯಂತ್ರಣ ರೇಖೆಯ(ಎಲ್ಎಸಿ) ಚುಶೂಲ್ ಪ್ರದೇಶದಲ್ಲಿ ಬೆಳಗ್ಗೆ 9.30ರಿಂದ ಉನ್ನತ ಮಟ್ಟದ ಮಾತುಕತೆ ನಡೆಯಿತು. ಲೇಹ್ನಲ್ಲಿ ನಿಯೋಜನೆಗೊಂಡಿರುವ 14 ಕಾರ್ಪ್ಸ್ನ ನೂತನ ಕಮಾಂಡರ್ ಲೆ.ಜನರಲ್ ಪಿಜಿಕೆ ಮೆನನ್ ನೇತೃತ್ವದ ಭಾರತದ ನಿಯೋಗವು ಸಭೆಯಲ್ಲಿ ಭಾಗವಹಿಸಿತು.
ಅ.12ರಂದು ಎರಡೂ ದೇಶದ ಸೇನಾ ಅಧಿಕಾರಿಗಳ ಏಳನೇ ಸುತ್ತಿನ ಮಾತುಕತೆ ನಡೆದಿತ್ತು. ಈ ಸಭೆಯಲ್ಲಿ ಪ್ಯಾಂಗಾಂಗ್ ಸರೋವರದ ಸುತ್ತಮುತ್ತಲಿರುವ ಪ್ರಮುಖ ಪರ್ವತ ಪ್ರದೇಶಗಳಿಂದ ಭಾರತದ ಸೈನಿಕರು ಹಿಂದಕ್ಕೆ ಸರಿಯಬೇಕು ಎಂದು ಚೀನಾವು ಆಗ್ರಹಿಸಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಭಾರತ, ಘರ್ಷಣೆ ಸಂಭವಿಸಬಹುದಾದ ಪ್ರದೇಶಗಳಿಂದ ಎರಡೂ ದೇಶಗಳ ಸೈನಿಕರು ಏಕಕಾಲದಲ್ಲಿ ಹಿಂದೆಸರಿಯಬೇಕು ಎಂದು ಪ್ರತಿಪಾದಿಸಿತ್ತು. ಮಾತುಕತೆ ಮುಖಾಂತರವೇ ಒಮ್ಮತವಾದ ಪರಿಹಾರ ಕಂಡುಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿತ್ತು.
ಗಡಿ ಬಿಕ್ಕಟ್ಟಿನ ಬಳಿಕ ಭಾರತವು ಪೂರ್ವ ಲಡಾಖ್ ಪ್ರದೇಶದಲ್ಲಿ 50 ಸಾವಿರಕ್ಕೂ ಅಧಿಕ ಸೈನಿಕರನ್ನು ನಿಯೋಜಿಸಿದ್ದು, ಚೀನಾವೂ ತನ್ನ ಗಡಿಯಲ್ಲಿ ಇಷ್ಟೇ ಸಂಖ್ಯೆಯ ಸೈನಿಕರನ್ನು ನಿಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.