ADVERTISEMENT

ಚೀನಾದಿಂದ ಲಡಾಖ್‌ನ ಗೋಮಾಳ ಸ್ವಾಧೀನ, ಜನರು ತಲ್ಲಣ: ಮೋದಿ ವಿರುದ್ಧ ರಾಹುಲ್‌ ಕಿಡಿ

ಪಿಟಿಐ
Published 20 ಆಗಸ್ಟ್ 2023, 13:42 IST
Last Updated 20 ಆಗಸ್ಟ್ 2023, 13:42 IST
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಲೇಹ್‌ನ ಪ್ಯಾಂಗಾಂಗ್‌ ಸರೋವರದ ಬಳಿ ತಮ್ಮ ತಂದೆ ರಾಜೀವ್‌ ಗಾಂಧಿ ಅವರ ಜನ್ಮದಿನದ ಅಂಗವಾಗಿ ಭಾನುವಾರ ಗೌರವ ನಮನ ಸಲ್ಲಿಸಿದರು
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಲೇಹ್‌ನ ಪ್ಯಾಂಗಾಂಗ್‌ ಸರೋವರದ ಬಳಿ ತಮ್ಮ ತಂದೆ ರಾಜೀವ್‌ ಗಾಂಧಿ ಅವರ ಜನ್ಮದಿನದ ಅಂಗವಾಗಿ ಭಾನುವಾರ ಗೌರವ ನಮನ ಸಲ್ಲಿಸಿದರು    –ಪಿಟಿಐ ಚಿತ್ರ

ಲೇಹ್‌: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಭಾನುವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಲಡಾಖ್‌ನ ಒಂದಿಂಚೂ ಭೂಮಿಯನ್ನು ಚೀನಾ ವಶಪಡಿಸಿಕೊಂಡಿಲ್ಲ ಎಂದು ಮೋದಿ ಅವರು ಹೇಳಿರುವುದು ಸತ್ಯಕ್ಕೆ ದೂರವಾದ ಮಾತು’ ಎಂದರು.

ತಮ್ಮ ತಂದೆ ಹಾಗೂ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಜನ್ಮದಿನದ ಅಂಗವಾಗಿ ಗೌರವನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚೀನಾ ಸೇನೆಯು ಲಡಾಖ್‌ನ ಗೋಮಾಳವನ್ನು ಚೀನಾ ಸೇನೆ ಸ್ವಾಧೀನಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಇಲ್ಲಿನ ಜನರು ತಲ್ಲಣಗೊಂಡಿದ್ದಾರೆ’ ಎಂದು ತಿಳಿಸಿದರು.

‘ಚೀನಾ ಸೇನೆಯು ಒಳನುಸುಳಿ ತಮ್ಮ ಗೋಮಾಳ ವಶಪಡಿಸಿಕೊಂಡಿದೆ. ಅಲ್ಲಿಗೆ ಪ್ರವೇಶಿಸಲು ತಮಗ್ಯಾರಿಗೂ ಅವಕಾಶವಿಲ್ಲ ಎಂದು ಇಲ್ಲಿನ ಜನರು ಸ್ಪಷ್ಟವಾಗಿ ಹೇಳಿದ್ದಾರೆ’ ಎಂದರು.

ADVERTISEMENT

‘ಭಾರತ್‌ ಜೋಡೊ ಯಾತ್ರೆಯ ವೇಳೆಯೇ ನಾನು ಲಾಡಾಖ್‌ಗೆ ಬರಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಇಲ್ಲಿಗೆ ಭೇಟಿ ನೀಡುವ ಯೋಜನೆ ಕೈಬಿಡಬೇಕಾಯಿತು. ಆದ್ದರಿಂದ ಸಂಪೂರ್ಣ ಪ್ರಮಾಣದ ಪ್ರವಾಸ ಕೈಗೊಳ್ಳಲೆಂದು ಈಗ ಇಲ್ಲಿಗೆ ಬಂದಿದ್ದೇನೆ’ ಎಂದು ವಿವರಿಸಿದರು.

‘ನಾನು ಈಗಾಗಲೇ ಪ್ಯಾಂಗಾಂಗ್‌ಗೆ ಬಂದಿದ್ದೇನೆ. ನಂತರ, ನುಬ್ರಾ ಮತ್ತು ಕಾರ್ಗಿಲ್‌ಗೆ ಭೇಟಿ ನೀಡಲಿದ್ದೇನೆ. ಈ ಪ್ರವಾಸದ ಉದ್ದೇಶವೇನೆಂದರೆ ಇಲ್ಲಿನ ಜನರ ಏನು ಹೇಳುತ್ತಾರೆ ಮತ್ತು ಅವರ ಕಷ್ಟಗಳೇನು ಎಂಬುದನ್ನು ಆಲಿಸುವುದು. ಗೋಮಾಳ ವಶದ ಕುರಿತು ಜನರು ವಿಪರೀತ ಕಳವಳಗೊಂಡಿದ್ದಾರೆ. ಇಲ್ಲಿನ ಮತ್ತೊಂದು ಸಮಸ್ಯೆಯೇನೆಂದರೆ ಸಮರ್ಪಕ ದೂರವಾಣಿ ಸಂಪರ್ಕ ಇಲ್ಲದಿರುವುದು’ ಎಂದು ಅವರು ತಮ್ಮ ಅನುಭವ ಹಂಚಿಕೊಂಡರು.

ಈ ಪ್ರದೇಶದಲ್ಲಿ (ಲಡಾಖ್‌) ಯಾರನ್ನೇ ಕೇಳಿ, ಚೀನಾ ಸೇನೆ ಗೋಮಾಳವನ್ನು ಸ್ವಾಧೀನಪಡಿಸಿಕೊಂಡಿದೆ ಎಂದೇ ಹೇಳುತ್ತಾರೆ.
-ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.