ADVERTISEMENT

ಏಕರೂಪ ನಾಗರಿಕ ಸಂಹಿತೆ ಅಪೇಕ್ಷಣೀಯವಲ್ಲ: ಕಾನೂನು ಆಯೋಗ

ಕುಟುಂಬ ಕಾನೂನುಗಳನ್ನು ಸುಧಾರಣೆ ಮಾಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 10:39 IST
Last Updated 1 ಸೆಪ್ಟೆಂಬರ್ 2018, 10:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸದ್ಯದ ಪರಿಸ್ಥಿತಿಯಲ್ಲಿ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಅಪೇಕ್ಷಣೀಯವಲ್ಲ ಎಂದು ಭಾರತೀಯ ಕಾನೂನು ಆಯೋಗ ಹೇಳಿದೆ. ಜತೆಗೆ, ಪ್ರತಿಯೊಂದು ಧರ್ಮದ ಒಳಗಣ ಕುಟುಂಬ ಕಾನೂನುಗಳನ್ನು ಸುಧಾರಣೆ ಮಾಡಿ ಲಿಂಗಸಮಾನತೆಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದೆ.

ಶುಕ್ರವಾರ ಬಿಡುಗಡೆ ಮಾಡಿರುವ ‘ಕೌಟುಂಬಿಕ ಕಾನೂನು ಸುಧಾರಣೆಗಳ ಕುರಿತಾದ ಸಮಾಲೋಚನಾ’ ವರದಿಯಲ್ಲಿ ಆಯೋಗವು, ವಿವಿಧ ಸಮುದಾಯಗಳ ನಡುವಣ ಸಮಾನತೆಗಿಂತಲೂ ಸಮುದಾಯಗಳ ಒಳಗೆ ಮಹಿಳೆ ಮತ್ತು ಪುರುಷರ ನಡುವೆ ಸಮಾನತೆ ನೀಡುವುದು ಅಗತ್ಯ ಎಂಬ ನಿಲುವು ವ್ಯಕ್ತಪಡಿಸಿದೆ.

ಏಕರೂಪ ನಾಗರಿಕ ಸಂಹಿತೆಗಿಂತಲೂ ತಾರತಮ್ಯಕ್ಕೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಗಮನಹರಿಸಬೇಕಾದ ಅಗತ್ಯವಿದೆ. ಹೆಚ್ಚಿನ ದೇಶಗಳು ಈಗ ವ್ಯತ್ಯಾಸಗಳನ್ನು ಗುರುತಿಸುವತ್ತ ಸಾಗುತ್ತಿವೆ. ವ್ಯತ್ಯಾಸದ ಇರುವಿಕೆಯು ತಾರತಮ್ಯವನ್ನು ಸೂಚಿಸುವುದಿಲ್ಲ, ಪ್ರಜಾಪ್ರಭುತ್ವದ ದೃಢತೆಯನ್ನು ಬಿಂಬಿಸುತ್ತದೆ ಎಂದು ಆಯೋಗ ಉಲ್ಲೇಖಿಸಿರುವುದನ್ನು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಯಾವುದೇ ರಾಜಿ ಮಾಡಿಕೊಳ್ಳದೆ ಮಹಿಳೆಯರಿಗೆ ಸಮಾನತೆಯ ಹಕ್ಕನ್ನು ನೀಡುವ ಬಗ್ಗೆ ಖಚಿತತೆ ನೀಡಬೇಕು ಎಂದೂ ಆಯೋಗ ಹೇಳಿದೆ.

ಸತಿ, ದೇವದಾಸಿ ಪದ್ಧತಿ, ತ್ರಿವಳಿ ತಲಾಖ್ ಮತ್ತು ಬಾಲ್ಯವಿವಾಹಗಳು‘ಸಾಮಾಜಿಕ ಅನಿಷ್ಟಗಳು’. ಈ ಪದ್ಧತಿಗಳು ಧರ್ಮಕ್ಕೆ ಅವಶ್ಯವಲ್ಲ ಮತ್ತು ಮಾನವಹಕ್ಕುಗಳ ಮೂಲ ತತ್ವಗಳನ್ನು ಅನುಸರಿಸುವುದಿಲ್ಲ. ಮಹಿಳೆಯರು ಹಾಗೂ ಮಕ್ಕಳಿಗೆ ಅನನುಕೂಲವಾಗುವಂತಹ ಎಲ್ಲ ವೈಯಕ್ತಿಕ, ಧಾರ್ಮಿಕ ಮತ್ತು ಜಾತ್ಯತೀತ ಕಾನೂನುಗಳಲ್ಲಿ ಸುಧಾರಣೆಯಾಗಬೇಕು ಎಂದು ಆಯೋಗ ಶಿಫಾರಸು ಮಾಡಿದೆ.

ಇದನ್ನೂ ಓದಿ...

* ವಿರೋಧಿಸುವುದು ದೇಶದ್ರೋಹವಲ್ಲ, ಜನರಿಗೆ ಟೀಕಿಸುವ ಹಕ್ಕು ಇದೆ: ಕಾನೂನು ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.