ನವದೆಹಲಿ: ನಕಾರಾತ್ಮಕ ವಿಷಯಗಳನ್ನು ಹಬ್ಬಿಸುವುದು ತುಂಬಾ ಸುಲಭ. ಹೀಗಿರುವಾಗ ಧನಾತ್ಮಕ ವಿಷಯಗಳನ್ನು ಹಬ್ಬಿಸಲು ಜನರು ಒಂದಾಗಿ ಮುಂದೆ ಬರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ವರ್ಷದ ಕೊನೆಯ ಸಂಚಿಕೆ, ಮನದ ಮಾತು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಮ್ಮ ನಿರ್ಧಾರಗಳು ಗಟ್ಟಿಯಾಗಿದ್ದರೆ ಯಾವುದೇ ಅಡೆತಡೆಗಳು ನಮ್ಮನ್ನು ಬಾಧಿಸುವುದಿಲ್ಲ ಎಂದಿದ್ದಾರೆ.
ಭಾರತದ ಸಾಧನೆ ಮತ್ತು ಪ್ರಗತಿ 2019ರಲ್ಲಿಯೂ ಮುಂದುವರಿಯಲಿ.ಉತ್ತಮ ಆಂತರಿಕ ಬಲದಿಂದಾಗಿ ದೇಶ ಮತ್ತಷ್ಟು ಎತ್ತರಕ್ಕೆ ಏರಲಿ ಎಂದು ನಾನು ಆಶಿಸುತ್ತೇನೆ. ಧನಾತ್ಮಕ ವಿಷಯಗಳನ್ನು ವೈರಲ್ ಮಾಡಲು ಎಲ್ಲರೂ ಜತೆಯಾಗಿ ಬನ್ನಿ. ಈ ರೀತಿ ಮಾಡುವುದರ ಮೂಲಕ ನಮ್ಮ ಸಮಾಜದಲ್ಲಿ ಬದಲಾವಣೆ ತಂದ ನಾಯಕರ ಬಗ್ಗೆ ಹೆಚ್ಚಿನವರಿಗೆ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ. ನಕಾರಾತ್ಮಕ ವಿಷಯಗಳನ್ನು ಹಬ್ಬಿಸುವುದು ಸುಲಭ. ಆದರೆ ನಮ್ಮ ಸುತ್ತಲೂ ಕೆಲವು ಉತ್ತಮ ಕೆಲಸಗಳು ನಡೆಯುತ್ತಿರುತ್ತವೆ.
ಹಲವಾರು ವೆಬ್ಸೈಟ್ಗಳು ಪಾಸಿಟಿವ್ ಸುದ್ದಿಗಳನ್ನು ಪ್ರಕಟಿಸುತ್ತಿವೆ. ಅಂಥಾ ಸುದ್ದಿಗಳನ್ನು ಶೇರ್ ಮಾಡುವ ಮೂಲಕ ಧನಾತ್ಮಕ ವಿಷಯಗಳನ್ನು ವೈರಲ್ ಮಾಡಬಹುದು.
2018ರಲ್ಲಿ ಜಗತ್ತಿನ ಅತಿದೊಡ್ಡ ಆರೋಗ್ಯ ವಿಮೆ ಯೋಜನೆ ಆಯುಷ್ಮಾನ್ ಭಾರತ್ಗೆ ಚಾಲನೆ ನೀಡಲಾಯಿತು.
ಈ ವರ್ಷ ದೇಶದ ಪ್ರತಿ ಗ್ರಾಮಗಳಿಗೂ ವಿದ್ಯುತ್ ಲಭಿಸಿತು.ಬಡತನ ನಿರ್ಮೂಲನೆಗಾಗಿ ಸರ್ಕಾರ ಶ್ರಮಿಸಿದೆ ಎಂಬುದನ್ನು ಜಗತ್ತಿನ ಖ್ಯಾತ ಸಂಸ್ಥೆಗಳು ಒಪ್ಪಿಕೊಂಡವು. ದೇಶದಲ್ಲಿ ಸ್ವಚ್ಛತೆ, ನೈರ್ಮಲ್ಯದ ಹಗ್ಗೆ ಜಾಗೃತಿ ಮೂಡಿಸಿ ಆ ಕಾರ್ಯದಲ್ಲಿ ಶೇ.95ರಷ್ಟು ಗೆಲುವು ಸಾಧಿಸಿದೆವು ಎಂದು ಮೋದಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.