ನವದೆಹಲಿ: ದೇಶದಲ್ಲಿ ತೀವ್ರವಾಗಿ ಹರಡುತ್ತಿರುವ ಕೊರೊನಾ ಸೋಂಕು ತಡೆಗಟ್ಟಲು ಹಲವು ರಾಜ್ಯ ಸರ್ಕಾರಗಳು ಸ್ಥಳೀಯವಾಗಿ ಲಾಕ್ಡೌನ್ಅನ್ನು ಮರು ಜಾರಿಗೊಳಿಸಲು ನಿರ್ಧರಿಸಿವೆ.
ಬೆಂಗಳೂರಿನಲ್ಲಿ ಒಂದು ವಾರದ ಲಾಕ್ಡೌನ್ ಘೋಷಣೆಯಾದ ಬೆನ್ನಹಿಂದೆಯೇ ಮಹಾರಾಷ್ಟ್ರದ ಪುಣೆ, ಪಿಂಪ್ರಿ–ಚಿಂಚವಾಡ ಹಾಗೂ ಮುಂಬೈ ಮಹಾನಗರದ ಕೆಲವು ಪ್ರದೇಶಗಳಲ್ಲಿಯೂ ಜುಲೈ 13ರಿಂದ ಲಾಕ್ಡೌನ್ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಅಸ್ಸಾಂ, ಮೇಘಾಲಯ ಮತ್ತು ಅರುಣಾಚಲ ಪ್ರದೇಶಗಳ ಬಹುತೇಕ ಭಾಗಗಳಲ್ಲಿ ಜನ ಮನೆಯಿಂದ ಹೊರಬಾರದಂತೆ ನಿರ್ಬಂಧ ವಿಧಿಸಲಾಗಿದೆ.
ಅಧಿಕ ಪ್ರಕರಣ:ದೇಶದಲ್ಲಿ ಶನಿವಾರ ಬೆಳಿಗ್ಗೆ ಕೊನೆಗೊಂಡ 24 ಗಂಟೆಗಳಲ್ಲಿ 29,113 ಹೊಸ ಪ್ರಕರಣಗಳು ವರದಿ
ಯಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿ, ದೇಶದ ಸ್ಥಿತಿಗತಿಯನ್ನು ಪರಾಮರ್ಶಿಸಿದರು. ‘ಪ್ರತಿಕ್ಷಣದ ಬೆಳವಣಿಗೆಗಳ ಮೇಲೆ ನಿಗಾ ಇಟ್ಟು, ಯಾವುದೇ ಲೋಪಗಳು ಆಗದಂತೆ ಪರಿಸ್ಥಿತಿಯನ್ನು ಸೂಕ್ತವಾಗಿ ನಿರ್ವಹಣೆ ಮಾಡಬೇಕು’ ಎಂದು ಸೂಚನೆ ನೀಡಿದರು.
ದೆಹಲಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ಸ್ಥಳೀಯ ಆಡಳಿತ ಸೋಂಕಿನ ನಿಯಂತ್ರಣಕ್ಕಾಗಿ ನಡೆಸಿರುವ ಪ್ರಯತ್ನಗಳಿಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು.
ಔಷಧಿಗೆ ಒಪ್ಪಿಗೆ: ಈ ಮಧ್ಯೆ ಸೋರಿಯಾಸಿಸ್ ಚಿಕಿತ್ಸೆಗೆ ನೀಡಲಾಗುವ ಇಟೋಲಿಜುಮಾಬ್ ಔಷಧಿಯನ್ನು ಕೋವಿಡ್ ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ನಿಯಂತ್ರಿತವಾಗಿ ನೀಡಲು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಅನುಮತಿ ದೊರೆತಿದೆ.
‘ಆಸ್ಪತ್ರೆಗಳಲ್ಲಿ ಹಾಗೂ ವೈದ್ಯರ ನಿಗಾದಲ್ಲಿ ಮಾತ್ರ ಈ ಔಷಧಿಯನ್ನು ರೋಗಿಗಳಿಗೆ ನೀಡಬೇಕು ಮತ್ತು ರೋಗಿಗಳಿಗೆ ಔಷಧಿಯಿಂದ ಎದುರಾಗಬಹುದಾದ ಅಪಾಯಗಳ ಕುರಿತೂ ಮಾಹಿತಿ ನೀಡಿರಬೇಕು’ ಎಂದೂ ಅದು ನಿರ್ದೇಶಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.