ADVERTISEMENT

ಜಮ್ಮು ಮತ್ತು ಕಾಶ್ಮೀರ: ಕಾಲ್ನಡಿಗೆಯಲ್ಲಿ ಹೊರಟಿದ್ದ ಮೂವರು ಕಾರ್ಮಿಕರ ಸಾವು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 14:47 IST
Last Updated 1 ಏಪ್ರಿಲ್ 2020, 14:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ದೇಶದಾದ್ಯಂತ ಲಾಕ್‌ಡೌನ್‌ ಆದ ಹಿನ್ನೆಲೆಯಲ್ಲಿ ಕಾಲ್ನಡಿಗೆಯಲ್ಲಿ ತಮ್ಮ ಗ್ರಾಮಗಳಿಗೆ ಹೊರಟಿದ್ದ ಕಾರ್ಮಿಕರು ಮನೆಯನ್ನು ತಲುಪಲಾಗದೆ ಮಾರ್ಗ ಮಧ್ಯೆಯೇ ಪ್ರಾಣಬಿಟ್ಟ ಧಾರುಣ ಘಟನೆ ಬುಧವಾರ ನಡೆದಿದೆ.

ಬನಿಹಾಲ್‌ ಜಿಲ್ಲೆಯ ಪಿರ್‌ ಪಾಂಚಲ್‌ ವಲಯದ ಹಿಜ್ಹಾಲ್‌ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಹಿಮ ತುಂಬಿದ ಪರ್ವತ ಶ್ರೇಣಿಯನ್ನು ದಾಟುತ್ತಿದ್ದಾಗ ನೀರ್ಗಲ್ಲಿನ ಮೇಲಿಂದ ಕಾಲು ಜಾರಿ ಪ್ರಪಾತಕ್ಕೆ ಬಿದ್ದು ಮೂವರು ಪ್ರಾಣ ಕಳೆದುಕೊಂಡಿದ್ದಾರೆ.

‘ಬನಿಹಾಲ್‌ಗೆ ಹೊರಟಿದ್ದ ಕಾರ್ಮಿಕರ ಗುಂಪಿನಲ್ಲಿ ಮೂವರು ಸುರಕ್ಷಿತವಾಗಿ ಮನೆ ತಲುಪಿದ್ದು, ಇತರ ಮೂವರು ಕಾಣದಿದ್ದಾಗ ಹುಡುಕಾಟ ನಡೆಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಗಾಯಗೊಂಡ ಮತ್ತೊಬ್ಬ ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ರಂಬಾನ್‌ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ ಹಸೀಬ್‌–ಉರ್‌–ರೆಹಮಾನ್‌ ತಿಳಿಸಿದ್ದಾರೆ.

ADVERTISEMENT

ದೇಶದಾದ್ಯಂತ ಲಾಕ್‌ ಡೌನ್‌ ಆಗಿರುವ ಪರಿಣಾಮ ಜಮ್ಮು ಕಾಶ್ಮೀರದಲ್ಲಿ ಸಿಲುಕಿರುವ ನೂರಾರು ವಲಸೆ ಕಾರ್ಮಿಕರು ಪ್ರತಿಕೂಲ ಹವಾಮಾನವನ್ನು ಲೆಕ್ಕಿಸದೇ ಕಾಲ್ನಡಿಗೆಯಲ್ಲಿ ಸ್ವಗ್ರಾಮಗಳಿಗೆ ಹೊರಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.