ADVERTISEMENT

ಅತಿದೊಡ್ಡ 'ಗುಂಪು ಹತ್ಯೆ' ನಡೆದಿದ್ದು ರಾಹುಲ್‌ ಗಾಂಧಿ ಅಪ್ಪನ ಕಾಲದಲ್ಲಿ: ಬಿಜೆಪಿ

ಪಿಟಿಐ
Published 22 ಡಿಸೆಂಬರ್ 2021, 2:57 IST
Last Updated 22 ಡಿಸೆಂಬರ್ 2021, 2:57 IST
ಕೇಂದ್ರ ಜಲಶಕ್ತಿ ಖಾತೆ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌
ಕೇಂದ್ರ ಜಲಶಕ್ತಿ ಖಾತೆ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌   

ನವದೆಹಲಿ: 'ಗುಂಪು ಹತ್ಯೆ' ಬಗ್ಗೆ ಪ್ರಶ್ನಿಸುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ. ರಾಹುಲ್‌ ಗಾಂಧಿ ಅವರ ತಂದೆ ರಾಜೀವ್‌ ಗಾಂಧಿ ಅವರ ಕಾಲದಲ್ಲಿ ನಡೆದಿದ್ದೇ ಭಾರತ ಇತಿಹಾಸದ ಅತಿದೊಡ್ಡ ಗುಂಪು ಹತ್ಯೆ' ಎಂದು ಕೇಂದ್ರ ಜಲಶಕ್ತಿ ಖಾತೆ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಟ್ವೀಟ್‌ನಲ್ಲಿ ಪ್ರಸ್ತಾಪಿಸಿದ್ದ 'ಗುಂಪು ಹತ್ಯೆ' ಟೀಕೆಗೆ ಗಜೇಂದ್ರ ಸಿಂಗ್‌ ಪ್ರತ್ಯುತ್ತರ ನೀಡಿದ್ದಾರೆ.

ಪಂಜಾಬ್‌ನ ಕಾಂಗ್ರೆಸ್‌ ನಾಯಕ ರಾಣಾ ಗುರ್‌ಮಿತ್‌ ಸಿಂಗ್‌ ಸೋಧಿ ಅವರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಗಜೇಂದ್ರ ಸಿಂಗ್‌, ಸ್ವತಂತ್ರ ಭಾರತದ ಇತಿಹಾಸದಲ್ಲಿ ನಡೆದ ಅತಿದೊಡ್ಡ ಗುಂಪು ಹತ್ಯೆ ರಾಜೀವ್‌ ಗಾಂಧಿ, ಈಗಿನ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ತಂದೆಯ ಕಾಲದಲ್ಲಿ ನಡೆದಿದೆ ಎಂದು ಹೇಳಿದರು.

ADVERTISEMENT

'ಕಾಂಗ್ರೆಸ್‌ ಸಂಸದರು ಮತ್ತು ಕಾರ್ಯಕರ್ತರು ನಡೆಸಿದ ಸಿಖ್ಖರ ಗುಂಪು ಹತ್ಯೆಯನ್ನು (3,000ಕ್ಕೂ ಹೆಚ್ಚು ಸಿಖ್ಖರನ್ನು ಹತ್ಯೆ) ತಮ್ಮ ತಂದೆ ರಾಜೀವ್‌ ಗಾಂಧಿ ಬೆಂಬಲಿಸಿದ್ದನ್ನು ರಾಹುಲ್‌ ಗಾಂಧಿ ಮರೆತಿದ್ದಾರೆ' ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಆರ್‌.ಪಿ.ಸಿಂಗ್‌ ಪ್ರತಿಕ್ರಿಯಿಸಿದ್ದಾರೆ.

'ದೊಡ್ಡ ಮರ ಬಿದ್ದಾಗ ಭೂಮಿ ಕಂಪಿಸುತ್ತದೆ' ಎಂಬ ರಾಜೀವ್‌ ಗಾಂಧಿ ಹೇಳಿಕೆಯನ್ನು ಉಲ್ಲೇಖಿಸಿ ಮತ್ತೊಬ್ಬ ಬಿಜೆಪಿ ನಾಯಕ ಮನ್‌ಜಿಂದರ್‌ ಸಿಂಗ್‌ ಸಿರ್ಸಾ ತಿರುಗೇಟು ನೀಡಿದ್ದಾರೆ. 'ಅದು ನಿಜ, ರಾಹುಲ್‌ ಗಾಂಧಿ ಅವರು 2014ಕ್ಕಿಂತ ಮೊದಲು ಗುಂಪು ಹತ್ಯೆ ಬಗ್ಗೆ ಕೇಳಿರಲಿಲ್ಲ. ಏಕೆಂದರೆ, ಸಾವಿರಾರು ಮುಗ್ಧ ಸಿಖ್ಖರು ಕೊಲ್ಲಲ್ಪಟ್ಟಿದ್ದು ದೊಡ್ಡ ಮರ ಉರುಳಿದ್ದರ ಸರಿಗಟ್ಟುವಿಕೆ' ಎಂದು ಸಿರ್ಸಾ ಮಾರ್ಮಿಕವಾಗಿ ಹೇಳಿದ್ದಾರೆ.

2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಕಾಂಗ್ರೆಸ್‌ ನಾಯಕ ಸಜ್ಜನ್‌ ಕುಮಾರ್‌ ಅವರನ್ನು ಸಿಖ್‌ ವಿರೋಧಿ ದಂಗೆಗೆ ಸಂಬಂಧಿಸಿ ಜೈಲಿಗೆ ಕಳುಹಿಸಿದಾಗ ರಾಹುಲ್‌ ಗಾಂಧಿ ಮೊದಲ ಬಾರಿಗೆ ಗುಂಪು ಹತ್ಯೆಯ ಪದ ಕೇಳಿರುತ್ತಾರೆ ಎಂದು ಸಿರ್ಸಾ ಟೀಕಿಸಿದ್ದಾರೆ.

'2014ಕ್ಕಿಂತ ಮೊದಲು ಗುಂಪು ಹತ್ಯೆ (ಲಿಂಚಿಂಗ್‌) ಎಂಬ ಪದವನ್ನು ಬಹುಮಟ್ಟಿಗೆ ಕೇಳಿರಲಿಲ್ಲ' ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.