ADVERTISEMENT

ಕಾಂಗ್ರೆಸ್ ಪಕ್ಷವನ್ನು ಯಾರಿಂದಲೂ ಉಳಿಸಲು ಸಾಧ್ಯವಿಲ್ಲ: ಶಿವರಾಜ್ ಸಿಂಗ್ ಚೌಹಾಣ್

ಏಜೆನ್ಸೀಸ್
Published 24 ಆಗಸ್ಟ್ 2020, 13:20 IST
Last Updated 24 ಆಗಸ್ಟ್ 2020, 13:20 IST
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್   

ಭೋಪಾಲ್: ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಕಾಂಗ್ರೆಸ್‌ನೊಳಗೆ ಅಸಮಾಧಾನ ಭುಗಿಲೆದ್ದಿರುವ ಕುರಿತು ವರದಿಯಾಗುತ್ತಿದ್ದಂತೆ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು, ಅಂತಹ ಪಕ್ಷವನ್ನು ಯಾರಿಂದಲೂ ಉಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡುತ್ತ, 'ಜ್ಯೋತಿರಾದಿತ್ಯ ಸಿಂಧಿಯಾ ಅವರು ಪಕ್ಷದ ವಿರುದ್ಧ ಧ್ವನಿ ಎತ್ತಿದಾಗ, ಅವರು ಭಾರತೀಯ ಜನತಾ ಪಕ್ಷದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಯಿತು. ಈಗ, ಗುಲಾಂ ನಬಿ ಆಜಾದ್ ಮತ್ತು ಕಪಿಲ್ ಸಿಬಲ್ ಅವರಂತಹ ನಾಯಕರು ಪೂರ್ಣಾವಧಿಯ ಅಧ್ಯಕ್ಷರ ಆಯ್ಕೆಗೆ ಒತ್ತಾಯಿಸುತ್ತಿರುವಾಗ, ಅವರೂ ಸಹ ಬಿಜೆಪಿಯೊಂದಿಗೆ ನಂಟನ್ನು ಹೊಂದಿದ್ದಾರೆ ಎಂದು ಆರೋಪಿಸಲಾಗುತ್ತಿದೆ'. ಇಂತಹ ಪಕ್ಷವನ್ನು ಯಾರೂ ಉಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಈ ಮಧ್ಯೆ ಬಿಜೆಪಿ ನಾಯಕಿ ಉಮಾಭಾರತಿ ಕೂಡ ಮಾತನಾಡಿದ್ದು, ಪಕ್ಷದ ರಾಜಕೀಯ ಪ್ರಾಬಲ್ಯ ಮುಗಿದಿದೆ. 'ಗಾಂಧಿ-ನೆಹರು ಕುಟುಂಬದ ಅಸ್ತಿತ್ವವೇ ಈಗ ಬಿಕ್ಕಟ್ಟಿನಲ್ಲಿದೆ, ಅವರ ರಾಜಕೀಯ ಪ್ರಾಬಲ್ಯ ಮುಗಿದಿದೆ, ಕಾಂಗ್ರೆಸ್ ಮುಗಿದೋಗಿದೆ... ಆದ್ದರಿಂದ ಯಾರು ಈಗ ಯಾವ ಸ್ಥಾನದಲ್ಲಿರುತ್ತಾರೆ ಎಂಬುದು ಅಷ್ಟೇನೂ ಮುಖ್ಯವಲ್ಲ. ಕಾಂಗ್ರೆಸ್ ಈಗ ಗಾಂಧಿಗೆ ಹಿಂದಿರುಗಬೇಕಿದೆ, ಯಾವುದೇ ವಿದೇಶಿ ಅಂಶಗಳಿಲ್ಲದೆ ನಿಜವಾದ 'ಸ್ವದೇಶಿ' ಗಾಂಧಿಗೆ ಮರಳಬೇಕು ಎಂದು ತಿಳಿಸಿದ್ದಾರೆ.

ADVERTISEMENT

ಪಕ್ಷಕ್ಕೆ ಪೂರ್ಣಾವಧಿಯ ನಾಯಕತ್ವದ ಅಗತ್ಯವಿದೆ ಎಂದು ಹಿರಿಯ ನಾಯಕರು ಕಾಂಗ್ರೆಸ್‌ನ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದ ಕುರಿತು ಸಿಡಬ್ಲ್ಯುಸಿ ಸಭೆಯಲ್ಲಿ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಪತ್ರ ಬರೆದಿರುವವರಿಗೆ ಬಿಜೆಪಿ ನಂಟಿದೆ ಎಂದು ಹೇಳಿರುವುದಾಗಿ ವರದಿಯಾಗಿತ್ತು. ಆದರೆ, ನಂತರ ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ ಅವರು 'ರಾಹುಲ್ ಗಾಂಧಿ ಈ ರೀತಿಯ ಯಾವ ಮಾತನ್ನೂ ಹೇಳಿಲ್ಲ ಅಥವಾ ಆ ಅರ್ಥವನ್ನು ಸೂಚಿಸಿಲ್ಲ' ಎಂದು ಸ್ಪಷ್ಟಪಡಿಸಿದರು.

ರಾಹುಲ್ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದ ಹಿರಿಯ ಮುಖಂಡ ಕಪಿಲ್ ಸಿಬಲ್ ಮತ್ತು ರಾಜ್ಯಸಭಾ ಸದಸ್ಯ ಗುಲಾಂ ನಬಿ ಆಜಾದ್ ಅವರು, ಮತ್ತೆ ರಾಹುಲ್ ಆ ರೀತಿ ಹೇಳಿಲ್ಲ ಎಂದು ತಿಳಿಸಿದ್ದರು. ಈ ಮೊದಲು ಟ್ವೀಟ್ ಮಾಡಿದ್ದ ಸಿಬಲ್ ಅವರು, ಮತ್ತೆ ಟ್ವೀಟ್‌ಅನ್ನು ಹಿಂಪಡೆದಿರುವುದಾಗಿ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.