ADVERTISEMENT

ಭಗವಾನ್ ‘ಹನುಮಾನ್‌‘ ಕೂಡ ಆದಿವಾಸಿ: ಕಾಂಗ್ರೆಸ್‌ ಶಾಸಕ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜೂನ್ 2023, 13:22 IST
Last Updated 10 ಜೂನ್ 2023, 13:22 IST
ಹನುಮಾನ್ 
ಹನುಮಾನ್    

ಭೋಪಾಲ್‌: ಭಗವಾನ್ ಹನುಮಾನ್ (ಹನುಮಂತ) ಕೂಡ ಆದಿವಾಸಿ ಎಂದು ಮಧ್ಯಪ್ರದೇಶದ ಕಾಂಗ್ರೆಸ್‌ ಶಾಸಕ ಉಮಂಗ್ ಸಿಂಘಾರ್ ಹೇಳಿದ್ದಾರೆ.

ಧಾರ್ ಜಿಲ್ಲೆಯಲ್ಲಿ ಬುಡಕಟ್ಟು ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ 123ನೇ ಪುಣ್ಯತಿಥಿ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ರಾಮಾಯಣದ ಕತೆಗಳಲ್ಲಿ ಹೇಳಿರುವಂತೆ ಲಂಕೆಯಲ್ಲಿದ್ದ ಸೀತೆಯನ್ನು ಕರೆದುಕೊಂಡು ಬರಲು ಶ್ರೀರಾಮ ವಾನರ ಸೇನೆಯ ಜೊತೆ ಅಲ್ಲಿಗೆ ಹೋಗಿದ್ದ. ಆದರೆ ವಾನರ ಸೇನೆ ಅಂದರೆ ಕಪಿಗಳಲ್ಲ, ಕಾಡಿನಲ್ಲಿ ವಾಸಿಸುತ್ತಿದ್ದ ಬುಡುಕಟ್ಟು ಜನರು, ಆದಿವಾಸಿಗಳು ಎಂದರು.

ADVERTISEMENT

ಇವರ ನೆರವಿನಿಂದ ಶ್ರೀರಾಮ ಲಂಕೆಗೆ ಹೋಗಿದ್ದ. ರಾಮನ ಭಕ್ತನಾಗಿದ್ದ ಹನುವಂತ ಕೂಡ ಆದಿವಾಸಿ. ನಾವು ಹನುವಂತನ ವಂಶಸ್ಥರು ಎಂದು ಹೆಮ್ಮೆಪಡಬೇಕು ಎಂದು ಸಿಂಘಾರ್ ಹೇಳಿದ್ದಾರೆ.

ಉಮಂಗ್ ಸಿಂಘಾರ್ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಇವರು ಮಾತನಾಡಿರುವ ವಿಡಿಯೊ ತುಣುಕನ್ನು ಪ್ರಿಯಾಂಕ ಗಾಂಧಿ, ಕಮಲ್‌ ನಾಥ್‌ ಅವರ ಸಾಮಾಜಿಕ ಮಾಧ್ಯಮಗಳಿಗೆ ಬಿಜೆಪಿ ಟ್ಯಾಗ್‌ ಮಾಡಿದೆ. 

ಕೆಲವು ದಿನಗಳ ಹಿಂದೆ ಕಾಂಗ್ರೆಸ್‌ನ ಮತ್ತೊಬ್ಬ ಆದಿವಾಸಿ ಶಾಸಕ ಅರ್ಜುನ್‌ ಸಿಂಗ್‌ ಅವರು ಸಹ ಹನುಮಂತ ಬುಡಕಟ್ಟು ಜನಾಂಗದವನು ಎಂದು ಹೇಳಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.