ಲಖನೌ: ಮಧ್ಯ ಪ್ರದೇಶ ರಾಜ್ಯಪಾಲ ಲಾಲ್ಜಿ ಟಂಡನ್ (85) ಮಂಗಳವಾರ ನಿಧನರಾದರು. ಅವರ ಮಗ ಅಶುತೋಶ್ ಟಂಡನ್ ಅವರು ಈ ಬಗ್ಗೆ ಟ್ವಿಟರ್ನಲ್ಲಿ ಪ್ರಕಟಿಸಿದ್ದಾರೆ.
ಉಸಿರಾಟದ ಸಮಸ್ಯೆ, ಜ್ವರ ಹಾಗೂ ಮೂತ್ರ ವಿಸರ್ಜನೆ ಸಮಸ್ಯೆಯಿಂದಾಗಿ ಜೂನ್ 11ರಂದು ಲಾಲ್ಜಿ ತಂಡನ್ ಅವರನ್ನು ಲಖನೌದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಮಾರ್ಗದರ್ಶನದಲ್ಲಿ ಟಂಡನ್ ಅವರು ರಾಜಕೀಯ ಬೆಳವಣಿಗೆ ಕಂಡರು. 2009ರಲ್ಲಿ ಬಿಜೆಪಿ ಮುಖಂಡ ಟಂಡನ್ ಲಖನೌದಿಂದ ಲೋಕಸಭಾ ಸಂಸದರಾಗಿ ಆಯ್ಕೆಯಾದರು. 1991ರಿಂದ 2003ರ ವರೆಗೂ ಉತ್ತರ ಪ್ರದೇಶದ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಆಗಸ್ಟ್ 2018ರಿಂದ ಜುಲೈ 2019ರ ವರೆಗೂ ಬಿಹಾರದ ಗವರ್ನರ್ ಆಗಿದ್ದರು.
ಉತ್ತರ ಪ್ರದೇಶದಲ್ಲಿ ಕಲ್ಯಾಣ್ ಸಿಂಗ್ ಸರ್ಕಾರದಲ್ಲಿ ಟಂಡನ್ ಸಚಿವರಾಗಿದ್ದರು. ಬಿಜೆಪಿ–ಬಿಎಸ್ಪಿ ಮೈತ್ರಿ ಸರ್ಕಾರದ ಮಾಯಾವತಿ ನೇತೃತ್ವದ ಸರ್ಕಾರದಲ್ಲಿ ಟಂಡನ್ ನಗರಾಭಿವೃದ್ಧಿ ಸಚಿವರಾಗಿದ್ದರು.
ಲಾಲ್ಜಿ ಟಂಡನ್ ಅವರ ಪುತ್ರ ಅಶುತೋಶ್ ಟಂಡನ್ ಅವರು ಪ್ರಸ್ತುರ ಉತ್ತರ ಪ್ರದೇಶ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದಾರೆ.
ಕಳೆದ ತಿಂಗಳು ಲಾಲ್ಜಿ ಟಂಡನ್ ಅವರು ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾದ ನಂತರ ಉತ್ತರ ಪ್ರದೇಶ ಗವರ್ನರ್ ಆನಂದಿಬೆನ್ ಪಟೇಲ್ ಅವರು ಮಧ್ಯ ಪ್ರದೇಶದ ಗವರ್ನರ್ ಆಗಿ ಹೆಚ್ಚುವರಿ ಹೊಣಿ ವಹಿಸಿದ್ದರು. ಗುಜರಾತ್ನ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರು ಕಳೆದ ವರ್ಷ ಉತ್ತರ ಪ್ರದೇಶ ಗನರ್ನರ್ ಆಗಿ ನೇಮಕಗೊಂಡಿದ್ದರು. ಅದಕ್ಕೂ ಮುನ್ನ ಮಧ್ಯ ಪ್ರದೇಶ ಗವರ್ನರ್ ಆಗಿದ್ದರು.
ಟಂಡನ್ ಅವರು ಬೆಳಿಗ್ಗೆ 5:35ಕ್ಕೆ ಆಸ್ಪತ್ರೆಯಲ್ಲಿ ನಿಧನರಾದರು. ಸಂಜೆ 5ಕ್ಕೆ ಅಂತಿಮ ಸಂಸ್ಕಾರ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. 'ಶ್ರೀ ಲಾಲ್ಜಿ ಟಂಡನ್ ಸಮಾಜ ಸೇವೆ, ಅವರ ಶ್ರಮದ ಕಾರ್ಯಗಳಿಂದ ನೆನಪಿನಲ್ಲಿ ಉಳಿಯುತ್ತಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಬಲಪಡಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಸಾರ್ವಜನಿಕ ಕಲ್ಯಾಣಕ್ಕಾಗಿ ಹೆಚ್ಚಿನ ಆದ್ಯತೆ ನೀಡುತ್ತಿದ್ದ ಅವರು ಪರಿಣಾಮಕಾರಿ ಆಡಳಿತಗಾರರಾಗಿದ್ದರು. ಅವರ ನಿಧನದಿಂದ ದುಃಖಿತನಾಗಿದ್ದೇನೆ ' ಎಂದು ಪ್ರಕಟಿಸಿದ್ದಾರೆ.
ಹಲವು ಗಣ್ಯರು, ರಾಜಕೀಯ ಮುಖಂಡರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ:
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.