ಟಿಕಾಮ್ಗಢ, ಮಧ್ಯಪ್ರದೇಶ:ಟಿಕಾಮ್ಗಢ ಜಿಲ್ಲೆಯ ಚಂದ್ರಾಪುರ ಜಿಲ್ಲೆಯ ರಾಮ್ ಹರ್ಷನ್ ಗೋಶಾಲೆಯಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳು ಸೋಮವಾರ ಸಾಯಂಕಾಲ ಮಧ್ಯ ಹಾಗೂ ಮಾಂಸ ಸೇವಿಸಿದ ಘಟನೆ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಬಲದೇವಘಡ ಜನಪದ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭಾಶ್ ಘಂಘೋರಿಯಾ ಮಂಗಳವಾರ ತಿಳಿಸಿದ್ದಾರೆ.
ಗೋಶಾಲೆಯಲ್ಲಿ ಸುಮಾರು 15 ಮಂದಿ ಸೇರಿಕೊಂಡು ಮದ್ಯ ಹಾಗೂ ಮಾಂಸದೊಡನೆ ಔತಣಕೂಟ ನಡೆಸುತ್ತಿರುವ ವಿಡಿಯೊ, ಸೋಮವಾರ ಸಾಯಂಕಾಲ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
‘ಅಹಿರ್ವಾರ್ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬ ಕೊಲೆ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿದ್ದಕ್ಕೆ ತನ್ನ ಜನರಿಂದ ಬಹಿಷ್ಕೃತನಾಗಿದ್ದ. ಈ ಶಿಕ್ಷೆಯು ಕೊನೆಗೊಳ್ಳಬೇಕಾದರೆ ಮದ್ಯ ಹಾಗೂ ಮಾಂಸದ ಔತಣಕೂಟ ಏರ್ಪಡಿಸುವಂತೆ ಆತನ ಸಮುದಾಯದ ಸದಸ್ಯರು ಹೇಳಿದ್ದರು’ ಎಂದುಘಂಘೋರಿಯಾ ಹೇಳಿದರು.
‘ಈ ವಿಷಯ ತಿಳಿಯುತ್ತಿದ್ದಂತೆಯೇ ಬಜರಂಗ ದಳದ ಮೂವರು ಕಾರ್ಯಕರ್ತರು ಸ್ಥಳಕ್ಕೆ ಹೋಗುತ್ತಿದ್ದಂತೆಯೇ, ಔತಣಕೂಟ ನಡೆಸುತ್ತಿದ್ದವರು ಗೋಶಾಲೆಯ ಆವರಣದಿಂದ ಓಡಿ ಹೋಗಿದ್ದಾರೆ. ಘಟನೆಯ ಬಗ್ಗೆ ರಚಿಸಲಾಗಿರುವ ತ್ರಿಸದಸ್ಯ ಸಮಿತಿಯು ಬುಧವಾರ ತನ್ನ ವರದಿಯನ್ನು ಸಲ್ಲಿಸಲಿದೆ. ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದೂ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.