ADVERTISEMENT

ಮಧ್ಯಪ್ರದೇಶ: ಕೂಲಿ ಕೇಳಿದ್ದಕ್ಕೆ ಕಾರ್ಮಿಕನ ಕೈ ಕತ್ತರಿಸಿದ ಮಾಲೀಕ, ಮೂವರ ಬಂಧನ

ಪಿಟಿಐ
Published 21 ನವೆಂಬರ್ 2021, 8:59 IST
Last Updated 21 ನವೆಂಬರ್ 2021, 8:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರೇವಾ, ಮಧ್ಯಪ್ರದೇಶ (ಪಿಟಿಐ): ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಕಾರ್ಮಿಕನೊಬ್ಬ ತನ್ನ ಬಾಕಿ ಕೂಲಿಯನ್ನು ಕೇಳಿದ್ದಕ್ಕೆ ಆತನ ಮಾಲೀಕರು ಕಾರ್ಮಿಕನ ಕೈ ಕತ್ತರಿಸಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ಹೇಳಿದ್ದಾರೆ.

ರೇವಾ ಜಿಲ್ಲಾ ಕೇಂದ್ರದಿಂದ 40 ಕಿ.ಮೀ. ದೂರದಲ್ಲಿರುವ ಸಿರ್ಮೌರ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಡೊಲ್ಮಾವು ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದರು.

ಪರಿಶಿಷ್ಟ ಜಾತಿಗೆ ಸೇರಿರುವ ಸಂತ್ರಸ್ತ ಅಶೋಕ್‌ ಸಾಕೇತ್‌, ಪಾಡ್ರಿ ಗ್ರಾಮದ ನಿವಾಸಿಯಾಗಿದ್ದು ಈ ಮೊದಲು ಡೊಲ್ಮಾವು ಗ್ರಾಮದ ಗಣೇಶ ಮಿಶ್ರಾ ಅವರ ನಿರ್ಮಾಣ ಕೆಲಸದಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದರು. ಬಾಕಿ ಕೂಲಿಯ ಸಂಬಂಧ ಸಾಕೇತ್‌ ಮತ್ತು ಮಿಶ್ರಾ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಮಾತು ವಿಕೋ‍ಪಕ್ಕೆ ತಿರುಗಿ ಮಿಶ್ರಾ ಮತ್ತು ಆತನ ಕಡೆಯವರು ಹರಿತ ಆಯುಧದಿಂದ ಸಾಕೇತ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಮಿಶ್ರಾ ಅವರು ಆಯುಧದಿಂದ ಸಾಕೇತ್‌ ಕೈ ಕತ್ತರಿಸಿದ್ದಾರೆ ಎಂದು ಸಹಾಯಕ ಪೊಲೀಸ್‌ ಅಧೀಕ್ಷಕ ಶಿವಕುಮಾರ್‌ ವರ್ಮಾ ಹೇಳಿದರು.

ADVERTISEMENT

ಮತ್ತೊಬ್ಬ ವ್ಯಕ್ತಿ ಶನಿವಾರ ಮಿಶ್ರಾ ಅವರನ್ನು ಭೇಟಿಯಾಗಿ ಬಾಕಿ ಕೂಲಿಯ ಸಮಸ್ಯೆ ಬಗೆಹರಿಸಿದ್ದಾರೆ ಎಂದೂ ಅವರು ಹೇಳಿದರು.

ಘಟನೆ ನಡೆದ ಸ್ವಲ್ಪ ಸಮಯದಲ್ಲೇ ಗಾಯಗೊಂಡ ಕಾರ್ಮಿಕನನ್ನು ಪೊಲೀಸರು ಸಂಜಯ ಗಾಂಧಿ ಸ್ಮಾರಕ ಆಸ್ಪತ್ರೆಗೆ ರವಾನಿಸಿದರು. ಅಲ್ಲಿ ವೈದ್ಯರ ತಂಡವೊಂದು ಶಸ್ತ್ರಚಿಕಿತ್ಸೆಯ ಮೂಲಕ ಕಾರ್ಮಿಕನಿಗೆ ಕೈಯನ್ನು ಮರುಜೋಡಿಸಿದರು.

ಬಹಳ ರಕ್ತ ಹೋಗಿದ್ದರಿಂದ ಕಾರ್ಮಿಕನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿರುವುದಾಗಿ ಶಿವಕುಮಾರ್ ವರ್ಮಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.