ADVERTISEMENT

ಮಹಾರಾಷ್ಟ್ರ ಸರ್ಕಾರ ಕೋವಿಡ್‌ ಪೀಡತರ ಸಂಖ್ಯೆ ಮರೆ ಮಾಚುತ್ತಿದೆ: ಬಿಜೆಪಿ ಸಂಸದ

ಪಿಟಿಐ
Published 12 ಜೂನ್ 2020, 9:02 IST
Last Updated 12 ಜೂನ್ 2020, 9:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಔರಂಗಾಬಾದ್‌: ಮಹಾರಾಷ್ಟ್ರ ಸರ್ಕಾರವು ಔರಂಗಾಬಾದ್‌ ಜಿಲ್ಲೆಯ ಕೋವಿಡ್‌ ಸೋಂಕಿತರ ನೈಜ ಅಂಕಿ ಅಂಶಗಳನ್ನು ಮರೆ ಮಾಚುತ್ತಿದೆ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಡಾ. ಭಾಗವತ್‌ ಕರಾಡ್‌ ಆರೋಪಿಸಿದ್ದಾರೆ.

ಜಿಲ್ಲೆಯಲ್ಲಿ ಲಭ್ಯವಿರುವ ಪರೀಕ್ಷಾ ಸಾಮರ್ಥ್ಯವನ್ನೂ ಸರ್ಕಾರ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದೂ ಅವರು ಶುಕ್ರವಾರ ದೂರಿದ್ದಾರೆ.

ಈ ಮೊದಲು ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿಗೆ ಕೋವಿಡ್‌ ದೃಢಪಟ್ಟರೆ, ಆತನ ಸಂಪರ್ಕದಲ್ಲಿದ್ದ 80ರಿಂದ 90 ಶಂಕಿತರನ್ನು ಪರೀಕ್ಷೆಗೊಳಪಡಿಸಲಾಗುತ್ತಿತ್ತು. ಇದರಿಂದ ಸೋಂಕು ನಿಯಂತ್ರಿಸಲು ಸಾಧ್ಯವಾಗಿತ್ತು. ಆದರೆ ಈಗ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಪರೀಕ್ಷಾ ಸಾಮರ್ಥ್ಯ ಇದ್ದರೂ ಅದರ ಸದ್ಬಳಕೆ ಆಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ರಾಜ್ಯ ಸರ್ಕಾರವು ನೈಜ ಅಂಕಿ ಅಂಶಗಳನ್ನು ಮುಚ್ಚಿಡುವ ಸಲುವಾಗಿ ಪರೀಕ್ಷಾ ಪ್ರಮಾಣವನ್ನೇ ಕಡಿಮೆ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

ಜಿಲ್ಲೆಯಲ್ಲಿನ ಕ್ವಾರಂಟೈನ್‌ ಸೌಲಭ್ಯವನ್ನೂ ಸರ್ಕಾರ ಸದ್ಬಳಕೆ ಮಾಡಿಕೊಂಡಿಲ್ಲ ಎಂದು ಅವರ ಇದೇ ವೇಳೆ ದೂರಿದ್ದಾರೆ.

ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗಿನವರೆಗೆ 2524 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 1363 ರೋಗಿಗಳು ಗುಣಮುಖರಾಗಿದ್ದಾರೆ. 128 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಜಿಲ್ಲೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.