ಪಣಜಿ: ‘ಕರ್ನಾಟಕ ಮತ್ತು ಗೋವಾ ಎರಡು ಕಣ್ಣುಗಳಿದ್ದಂತೆ. ಉಭಯ ರಾಜ್ಯಗಳ ಒಟ್ಟಾರೆ ಹಿತಾಸಕ್ತಿಯೇ ಬಿಜೆಪಿಯ ಹಿತಾಸಕ್ತಿ’ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಶನಿವಾರ ತಿಳಿಸಿದ್ದಾರೆ.
ಭಾನುವಾರ ಪಣಜಿಯಲ್ಲಿ ನಡೆಯಲಿರುವ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿರುವ ಅವರು, ಮಹದಾಯಿ ನದಿ ವಿವಾದ ಕುರಿತು ಪ್ರತಿಕ್ರಿಯಿಸಿದರು.
‘ಅಂತರರಾಜ್ಯ ನದಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಲಾಗುವುದು’ ಎಂದು ತಿಳಿಸಿದ್ದಾರೆ.
‘ರಾಷ್ಟ್ರಿಯ ಹಿತಾಸಕ್ತಿಗಾಗಿ ಬಿಜೆಪಿ ಶ್ರಮಿಸುತ್ತದೆ. ಗೋವಾ ರಾಜ್ಯವೂ ಕರ್ನಾಟಕ ಇದ್ದಂತೆ. ಕರ್ನಾಟಕವೂ ಗೋವಾ ಇದ್ದಂತೆ. ಹೀಗಾಗಿ, ಉಭಯ ರಾಜ್ಯಗಳ ಹಿತಾಸಕ್ತಿ ಕಾಪಾಡಲಾಗುವುದು’ ಎಂದು ಹೇಳಿದ್ದಾರೆ.
ಮಹದಾಯಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ಗೋವಾ ಸುಪ್ರೀಂ ಕೋರ್ಟ್ನಲ್ಲಿ ಎರಡು ಅರ್ಜಿಗಳನ್ನು ಈಗಾಗಲೇ ಸಲ್ಲಿಸಿದೆ. ಮಹದಾಯಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಮಂಡಳಿ ನೀಡಿರುವ ತೀರ್ಪು ಪ್ರಶ್ನಿಸಿ ವಿಶೇಷ ಅರ್ಜಿ ಸಲ್ಲಿಸಿದೆ. ಜತೆಗೆ, ಕರ್ನಾಟಕ ಮಹದಾಯಿ ನದಿಯಿಂದ ನೀರನ್ನು ಅಕ್ರಮವಾಗಿ ತಿರುಗಿಸಿದೆ ಎಂದು ಆರೋಪಿಸಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.