ಸೊಲ್ಲಾಪುರ: ಶಿವಸೇನಾ ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆಯಲ್ಲಿ ಬಡವರಿಗೆ ₹ 10ಕ್ಕೆಊಟ ನೀಡುವುದಾಗಿ ಹೇಳಿರುವುದನ್ನು ಎನ್ಸಿಪಿ ಮುಖಂಡ ಶರದ್ ಪವಾರ್ ಲೇವಡಿ ಮಾಡಿದ್ದಾರೆ.
ಹಿಂದೆ, ಮಹಾರಾಷ್ಟ್ರದಲ್ಲಿಶಿವಸೇನಾ– ಬಿಜೆಪಿ ಆಡಳಿತವಿದ್ದಾಗ ರಿಯಾಯಿತಿ ದರದಲ್ಲಿ ಝುಣಕಾ ಭಾಕರ್ (ಪಲ್ಯ– ರೊಟ್ಟಿ) ನೀಡುವ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಆದರೆ ಕ್ರಮೇಣ ಆ ಕೇಂದ್ರಗಳು ಮುಚ್ಚಿದ್ದವು. ಇಲ್ಲಿ ಆಯೋಜಿಸಿದ್ದ ಚುನಾವಣಾ ರ್ಯಾಲಿಯಲ್ಲಿ ಇದನ್ನು ಪ್ರಸ್ತಾಪಿಸಿದ ಪವಾರ್, ‘ಝುಣಕಾ ಭಾಕರ್ ಕೇಂದ್ರಗಳು ಯಾವಾಗ ಮುಚ್ಚಿದವು ಎಂಬುದು ತಿಳಿಯಲೇ ಇಲ್ಲ. ಅವುಗಳಿಗೆ ನೀಡಲಾಗಿದ್ದ ಜಾಗವನ್ನು ಶಿವಸೇನಾದವರು ಒತ್ತುವರಿ ಮಾಡಿಕೊಂಡರು. ಈಗ ₹ 10ಕ್ಕೆ ಊಟ ಕೊಡುವ ಯೋಜನೆಯನ್ನು ಘೋಷಿಸಲಾಗಿದೆ. ಜನರು ಆಡಳಿತ ನಡೆಸಲು ನಿಮ್ಮನ್ನು ಆಯ್ಕೆ ಮಾಡಬೇಕೋ ಅಥವಾ ಅಡುಗೆ ಮಾಡುವುದಕ್ಕೋ’ ಎಂದು ಪ್ರಶ್ನಿಸಿದರು.
‘ನಮಗೆ ಪ್ರಬಲ ಪ್ರತಿಸ್ಪರ್ಧಿಗಳೇ ಇಲ್ಲ’ ಎಂದು ಬಿಜೆಪಿ ಹಾಗೂ ಶಿವಸೇನಾ ಮುಖಂಡರು ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಪವಾರ್, ‘ಹಾಗಿದ್ದರೆ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 9 ರ್ಯಾಲಿ ಹಾಗೂ ಗೃಹಸಚಿವ ಅಮಿತ್ ಶಾ ಅವರು 20 ರ್ಯಾಲಿಗಳನ್ನು ನಡೆಸುವುದರ ಅಗತ್ಯವೇನು’ ಎಂದು ಪ್ರಶ್ನಿಸಿದರು.
‘ಪವಾರ್ ಪಾಪದ ಫಲ’
‘ರಾಜ್ಯದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆಗಳು ಶರದ್ ಪವಾರ್ ಅವರ ‘ಪಾಪದ ಕೂಸುಗಳು’ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಆರೋಪಿಸಿದ್ದಾರೆ.
ರೈತರ ಆತ್ಮಹತ್ಯೆಗಳನ್ನು ಮುಂದಿಟ್ಟು ತಮ್ಮ ವಿರುದ್ಧ ಪವಾರ್ ಅವರು ಮಾಡಿದ ಆರೋಪಗಳಿಗೆ ಚುನಾವಣಾ ರ್ಯಾಲಿಯೊಂದರಲ್ಲಿ ಉತ್ತರ ನೀಡಿದ ಫಡಣವೀಸ್, ‘ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಲು ಆರಂಭಿಸಿದ್ದಾಗ ಮುಖ್ಯಮಂತ್ರಿಯಾಗಿದ್ದವರು ಯಾರು. ನೀವು ವಿದರ್ಭಕ್ಕೆ ನೀರು ಸರಬರಾಜನ್ನು ನಿಲ್ಲಿಸಿದ್ದರಿಂದ ಆ ಭಾಗದ ಜನರ ಸ್ಥಿತಿ ಹೀಗಾಗಿದೆ. ಆಗ ನೀವು ಕೇಂದ್ರದಲ್ಲಿ ಸಚಿವರಾಗಿದ್ದಿರಿ. ಕಳೆದ 15 ವರ್ಷಗಳಿಂದ ಮಹಾರಾಷ್ಟ್ರದಲ್ಲಿ ನೀವೇ ಆಡಳಿತ ನಡೆಸಿದ್ದೀರಿ. ವಿದರ್ಭದ ರೈತರಿಗೆ ನೀಡಬೇಕಾದ ಹಣವನ್ನು ಭ್ರಷ್ಟ ಯೋಜನೆಗಳ ಮೂಲಕ ನೀವು ನುಂಗಿಹಾಕಿದಿರಿ. ಇದರಿಂದಾಗಿ ರೈತರು ಅತ್ಯಹತ್ಯೆ ಮಾಡಿಕೊಳ್ಳುವುದು ಅನಿವಾರ್ಯವಾಯಿತು’ ಎಂದು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.