
ಪ್ರಾತಿನಿಧಿಕ ಚಿತ್ರ
ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರದ ಮರಾಠವಾಡ ಪ್ರಾಂತ್ಯದಲ್ಲಿರುವ ಐತಿಹಾಸಿಕ ತಲ್ತಮ್ ಹಾಗೂ ಧರೂರ್ ಕೋಟೆಗಳ ರಕ್ಷಣೆಗೆ ಅಂದಾಜು ₹ 21 ಕೋಟಿ ನೀಡಲಾಗಿದೆ. ಆದಾಗ್ಯೂ, ನಿಯಮಿತ ನಿರ್ವಹಣೆ ಹಾಗೂ ಕಾವಲಿಗೆ ಸಿಬ್ಬಂದಿ ಕೊರತೆಯಿಂದಾಗಿ ಸಂರಕ್ಷಣೆಯ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಪುರಾತತ್ವ ಇಲಾಖೆ ಅಧಿಕಾರಿಗಳ ಪ್ರಕಾರ, ಛತ್ರಪತಿ ಸಂಭಾಜಿನಗರದ ಸಿಲ್ಲೋದ್ನಲ್ಲಿರುವ ತಲ್ತಮ್ ಕೋಟೆಗೆ ₹ 10 ಕೋಟಿ ನೀಡಲಾಗಿದೆ. ಅದೇ ರೀತಿ, ಬೀಡ್ ಜಿಲ್ಲೆಯಲ್ಲಿರುವ ಧರೂರ್ ಕೋಟೆಯ ಸಂರಕ್ಷಣೆಗೆ ₹ 11 ಕೋಟಿ ನೀಡಲಾಗಿದೆ.
ಈ ಹಣವನ್ನು ಕೋಟೆಯ ಗೋಡೆಗಳು, ರಚನೆಗಳನ್ನು ಮತ್ತೆ ನಿರ್ಮಿಸಲು, ಅತಿಕ್ರಮಣದಿಂದ ಹಾನಿಯಾಗಿರುವ ಭಾಗಗಳನ್ನು ದುರಸ್ತಿಗೊಳಿಸಲು ಬಳಸಲಾಗುತ್ತದೆ. ಅದರ ಹೊರತಾಗಿಯೂ, ಕೋಟೆಯ ರಕ್ಷಣೆಗೆ ಕಾವಲುಗಾರರ ಕೊರತೆ ಹಾಗೂ ವಾರ್ಷಿಕ ನಿರ್ವಹಣೆಗೆ ಬಜೆಟ್ನಲ್ಲಿ ನಿರ್ದಿಷ್ಟ ಅನುದಾನ ನಿಗದಿಯಾಗಿಲ್ಲ ಎಂದು ಅಧಿಕಾರಿಗಳು ಒತ್ತಿ ಹೇಳಿದ್ದಾರೆ.
ಮರಾಠವಾಡ ಪ್ರಾಂತ್ಯದ ಎಂಟು ಜಿಲ್ಲೆಗಳ ವ್ಯಾಪ್ತಿಯಲ್ಲಿ ಸುಮಾರು 200 ಸಂರಕ್ಷಿತ ಕೋಟೆ ಕೊತ್ತಲಗಳಿವೆ. ಅದರಲ್ಲಿ, 34 ಮಂದಿಯಷ್ಟೇ ಕಾಯಂ ಹಾಗೂ ಗುತ್ತಿಗೆ ಕಾವಲುಗಾರರಿದ್ದಾರೆ ಎಂದು ರಾಜ್ಯ ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕಿ ಜಯಾ ವಹಾನೆ ಪಿಟಿಐಗೆ ತಿಳಿಸಿದ್ದಾರೆ.
ಸರ್ಕಾರವು ಸ್ಮಾರಕಗಳ ರಕ್ಷಣೆಗೆ ಸಾಕಷ್ಟು ವ್ಯಯಿಸುತ್ತಿದೆಯಾದರೂ, ಸಿಬ್ಬಂದಿ ಕೊರತೆ ಹಿನ್ನಡೆಯಾಗಿ ಪರಿಣಮಿಸಿದೆ ಎಂದೂ ಹೇಳಿದ್ದಾರೆ.
ಇದೇ ಹಿನ್ನೆಲೆಯಲ್ಲಿ ಇಲಾಖೆಯು, ಸಿಬ್ಬಂದಿ ನೇಮಕ ಹಾಗೂ ವಾರ್ಷಿಕ ನಿರ್ವಹಣೆಯ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.