ಮುಂಬೈ: ಛತ್ರಪತಿ ಶಿವಾಜಿ ಕುರಿತು ವಿವಾದಿತ ಹೇಳಿಕೆ ನೀಡಿರುವ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ತಕ್ಷಣ ವಾಪಾಸ್ ಕರೆಸಿಕೊಳ್ಳುವಂತೆ ಒತ್ತಾಯಿಸಿರುವ ಶಿವಸೇನಾ ನಾಯಕ ಉದ್ಧವ್ ಠಾಕ್ರೆ, ಕೋಶಿಯಾರಿ ಕೇಂದ್ರ ಸರ್ಕಾರ ಮಹಾರಾಷ್ಟ್ರಕ್ಕೆ ಅಮೆಜಾನ್ನಿಂದ ಕಳುಹಿಸಿರುವ ಪಾರ್ಸೆಲ್ ಎಂದು ಲೇವಡಿ ಮಾಡಿದ್ದಾರೆ.
ರಾಜ್ಯಪಾಲರನ್ನು ವಾಪಾಸ್ ಕರೆಸಿಕೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿಯೂ ಮಾಜಿ ಮುಖ್ಯಮಂತ್ರಿ ಠಾಕ್ರೆ ಕೇಂದ್ರಕ್ಕೆ ಬೆದರಿಕೆಯೊಡ್ಡಿದ್ದಾರೆ.
‘ಈ ರಾಜ್ಯಪಾಲರು ಮಹಾರಾಷ್ಟ್ರಕ್ಕೆ ಕೇಂದ್ರ ಸರ್ಕಾರ ಅಮೆಜಾನ್ ಮೂಲಕ ಕಳುಹಿಸಿರುವ ಪಾರ್ಸೆಲ್. 2 ರಿಂದ 5 ದಿನದೊಳಗೆ ಅವರನ್ನು ವಾಪಾಸ್ ಕರೆಸಿಕೊಳ್ಳದಿದ್ದರೆ ಪ್ರತಿಭಟನೆ ಅಥವಾ ಬಂದ್ ನಡೆಸಲಾಗುವುದು’ ಎಂದು ಠಾಕ್ರೆ ಎಚ್ಚರಿಸಿದ್ದಾರೆ.
‘ಕೇಂದ್ರ ಸರ್ಕಾರಕ್ಕೆ ಅವರು ಕಳುಹಿಸಿರುವ ಸ್ಯಾಂಪಲ್ ಅನ್ನು ವಾಪಾಸ್ ಕರೆಸಿಕೊಳ್ಳುವಂತೆ ಮನವಿ ಮಾಡಿಕೊಳ್ಳುತ್ತೇವೆ. ಅಗತ್ಯವಿದ್ದರೆ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಿ. ನಮ್ಮ ರಾಜ್ಯಕ್ಕೆ ಅವರ ಅಗತ್ಯವಿಲ್ಲ’ ಎಂದು ಕಿಡಿಕಾರಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜ ಅವರನ್ನು ಹಳೆಯ ಕಾಲದ ಐಕಾನ್ ಎಂದು ವಿವಾದಿತ ಹೇಳಿಕೆ ನೀಡಿ ರಾಜ್ಯಪಾಲ ಕೋಶಿಯಾರಿ ಮಹಾರಾಷ್ಟ್ರದ ರಾಜಕೀಯ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.