ADVERTISEMENT

ಮಹಾರಾಷ್ಟ್ರದ ಯಾವುದೇ ಪ್ರಕರಣದ ತನಿಖೆಗೆ ಇನ್ನು ಸಿಬಿಐ ಪಡೆಯಬೇಕು ಅನುಮತಿ

1989ರ ಫೆಬ್ರವರಿಯಲ್ಲಿ ಸಿಬಿಐಗೆ ಮಹಾರಾಷ್ಟ್ರ ಸರ್ಕಾರ ನೀಡಿದ್ದ ಸಾಮಾನ್ಯ ಒಪ್ಪಿಗೆ ಹಿಂತೆಗೆತ

ಮೃತ್ಯುಂಜಯ ಬೋಸ್
Published 22 ಅಕ್ಟೋಬರ್ 2020, 6:42 IST
Last Updated 22 ಅಕ್ಟೋಬರ್ 2020, 6:42 IST
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ   
""

ಮುಂಬೈ: ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಬುಧವಾರ ರಾಜ್ಯದ ಪ್ರಕರಣಗಳ ತನಿಖೆಗಾಗಿ ಸಿಬಿಐಗೆ ನೀಡಿದ ಸಾಮಾನ್ಯ ಒಪ್ಪಿಗೆಯನ್ನು ಹಿಂತೆಗೆದುಕೊಂಡಿದೆ.

ಈ ನಿರ್ಧಾರದಿಂದಾಗಿ ಇನ್ನು ಮುಂದೆ ಯಾವುದೇ ಪ್ರಕರಣದ ತನಿಖೆಗಾಗಿ ಸಿಬಿಐ ಮಹಾರಾಷ್ಟ್ರವನ್ನು ಪ್ರವೇಶಿಸಿಸುವುದಕ್ಕೂ ಮೊದಲು ರಾಜ್ಯ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಲಿದೆ. ಬುಧವಾರ ಈ ಸಂಬಂಧ ಅಧಿಸೂಚನೆಯನ್ನೂ ಹೊರಡಿಸಲಾಗಿದೆ. ಭವಿಷ್ಯದ ಪ್ರಕರಣಗಳಿಗೆ ಈ ನಿರ್ಧಾರ ಅನ್ವಯವಾಗಲಿದೆಯಾದರೂ, ಈಗಾಗಲೇ ಸಿಬಿಐ ಕೈಗೊಂಡಿರುವ ಪ್ರಕರಣಗಳಿಗೆ ಈ ನಿರ್ಧಾರದಿಂದ ಯಾವುದೇ ಪರಿಣಾಮವಾಗದು.

ಮಹಾರಾಷ್ಟ್ರ ಸರ್ಕಾರದ ಆದೇಶ

‘1946ರ ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ’ ಕಾಯ್ದೆ ಅಡಿಯಲ್ಲಿ, ಗೃಹ ಇಲಾಖೆ ಅಧೀನ ಕಾರ್ಯದರ್ಶಿ ಕೈಲಾಸ್ ಗಾಯಕ್ವಾಡ್‌ ಅವರು ಈ ಸಂಬಂಧ ಆದೇಶ ಹೊರಡಿಸಿದ್ದಾರೆ. ‘1989ರ ಫೆಬ್ರವರಿಯಲ್ಲಿ ಸಿಬಿಐಗೆ ರಾಜ್ಯ ಸರ್ಕಾರ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂತೆಗೆದುಕೊಳ್ಳಲಾಗಿದೆ. ಇನ್ನು ಮುಂದೆ ರಾಜ್ಯದ ಯಾವುದೇ ಪ್ರಕರಣದ ತನಿಖೆ ಆರಂಭಿಸುವ ಮೊದಲು ಸರ್ಕಾರದ ಒಪ್ಪಿಗೆ ಪಡೆಯುವುದು ಅಗತ್ಯವಾಗಲಿದೆ,’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ಟಿಆರ್‌ಪಿ ಅಕ್ರಮ ಪ್ರಕರಣದ ಸಂಬಂಧ ಉತ್ತರ ಪ್ರದೇಶದ ಲಖನೌನ ಹಝರತ್‌ಗಂಜ್‌ ಪೊಲೀಸ್‌ ಠಾಣೆಯಲ್ಲಿ ಜಾಹೀರಾತು ಏಜೆನ್ಸಿಯೊಂದು ದಾಖಲಿಸಿದ ದೂರನ್ನು ಅಲ್ಲಿನ ಪೊಲೀಸರು ಸಿಬಿಐಗೆ ಶಿಫಾರಸು ಮಾಡಿದ್ದಾರೆ. ಹೀಗಾಗಿ, ಸಿಬಿಐ ಈ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಸಿಬಿಐ ಅನ್ನು ನಿರ್ಬಂಧಿಸುವ ನಿರ್ಧಾರ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.