ADVERTISEMENT

ಭಾಷಾ ದ್ವೇಷವು ಹೂಡಿಕೆಯ ಮೇಲೆ ಪರಿಣಾಮ ಬೀರುತ್ತದೆ: ಮಹಾರಾಷ್ಟ್ರ ರಾಜ್ಯಪಾಲ

ಪಿಟಿಐ
Published 23 ಜುಲೈ 2025, 6:58 IST
Last Updated 23 ಜುಲೈ 2025, 6:58 IST
   

ಮುಂಬೈ: ಭಾಷಾ ದ್ವೇಷ ಹರಡುವುದರಿಂದ ದೂರವಿರಿ. ಅದು ರಾಜ್ಯದ ಪ್ರಗತಿಯ ಜೊತೆಗೆ ಕೈಗಾರಿಕೆ ಹಾಗೂ ಹೂಡಿಕೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರು ಮಂಗಳವಾರ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ಹಿಂದಿಯನ್ನು ಮೂರನೇ ಭಾಷೆಯಾಗಿ ಸೇರ್ಪಡೆ ಮಾಡಿ ರಾಜ್ಯ ಸರ್ಕಾರವು ಆದೇಶಿಸಿತ್ತು. ತ್ರಿಭಾಷಾ ನೀತಿಗೆ ವಿರೋಧ ಪಕ್ಷಗಳಿಂದ ಭಾರಿ ವಿರೋಧ ವ್ಯಕ್ತವಾದ ಕಾರಣ ರಾಜ್ಯ ಸರ್ಕಾರವು ಎರಡು ಸರ್ಕಾರಿ ಆದೇಶಗಳನ್ನು ಹಿಂಪಡೆದಿತ್ತು.

ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರೊಂದಿಗಿನ ಭೇಟಿಯ ವೇಳೆ ಮಾತನಾಡಿದ ರಾಜ್ಯಪಾಲರು, ‘ಒಂದು ವೇಳೆ ನೀವು ಬಂದು ನನ್ನನ್ನು ಥಳಿಸಿದ ತಕ್ಷಣವೇ ನಾನು ಮರಾಠಿ ಮಾತನಾಡಲು ಸಾಧ್ಯವೇ?, ಭಾಷಾ ದ್ವೇಷ ಹರಡುವುದರಿಂದ ಯಾವುದೇ ಕೈಗಾರಿಕೆಗಳು ಹಾಗೂ ಹೂಡಿಕೆಗಳು ರಾಜ್ಯಕ್ಕೆ ಬರುವುದಿಲ್ಲ. ಇದರಿಂದ ಭವಿಷ್ಯದಲ್ಲಿ ರಾಜ್ಯಕ್ಕೆ ನಷ್ಟವಾಗಲಿದೆ’ ಎಂದಿದ್ದಾರೆ.

ADVERTISEMENT

‘ನಾನು ತಮಿಳುನಾಡಿನಲ್ಲಿ ಸಂಸದನಾಗಿದ್ದಾಗ, ತಮಿಳು ಮಾತನಾಡಲಿಲ್ಲ ಎಂದು ಒಂದು ಗುಂಪುನ್ನು ಇನ್ನೊಂದು ಗುಂಪು ಥಳಿಸಿದನ್ನು ನೋಡಿದ್ದೇನೆ. ನನಗೆ ಹಿಂದಿ ಅರ್ಥವಾಗುವುದಿಲ್ಲ, ಮಾತನಾಡಲೂ ಕಷ್ಟವಾಗುತ್ತದೆ. ನಾವು ಸಾಧ್ಯವಾದಷ್ಟು ಇತರೆ ಭಾಷೆಗಳನ್ನು ಕಲಿಯಬೇಕು ಹಾಗೂ ನಮ್ಮ ಮಾತೃಭಾಷೆಯ ಕುರಿತು ಅಭಿಮಾನ ಹೊಂದಿರಬೇಕು’ ಎಂದು ಹೇಳಿದ್ದಾರೆ.

ರಾಜ್ಯಪಾಲರ ಹೇಳಿಕೆಗೆ ತಿರುಗೇಟು ನೀಡಿರುವ ಶಿವಸೇನಾ(ಯುಬಿಟಿ) ಶಾಸಕ ಆದಿತ್ಯ ಠಾಕ್ರೆ, ‘ರಾಜ್ಯದಲ್ಲಿ ಯಾವುದೇ ರೀತಿಯ ಭಾಷಾ ದ್ವೇಷವಿಲ್ಲ. ಈ ಕುರಿತು ರಾಜಕೀಯ ಹೇಳಿಕೆಗಳನ್ನು ನೀಡುವ ಅಗತ್ಯವಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.