ನವದೆಹಲಿ: ಮಹಾರಾಷ್ಟ್ರದಲ್ಲಿ ನಡೆದ ಕ್ಷಿಪ್ರ ರಾಜಕೀಯ ಕ್ರಾಂತಿ ಬಗ್ಗೆ ಸಾಕಷ್ಟು ಮುಖಂಡರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಇದರಲ್ಲಿ, ಕೇಂದ್ರ ಆಹಾರ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಮಾಡಿರುವ ಟ್ವೀಟ್ ವೈರಲ್ ಆಗಿದೆ.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಎನ್ಸಿಪಿ, ಶಿವಸೇನಾ ಹಾಗೂ ಬಿಜೆಪಿ ಪಕ್ಷಗಳು ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿದ್ದವು. ಬಿಜೆಪಿ ಜೊತೆ ಹೋಗಿದ್ದ ಶಿವಸೇನಾ, ನಂತರ ಎನ್ಸಿಪಿ ಹಾಗೂ ಕಾಂಗ್ರೆಸ್ ಜೊತೆಗೆ ಹೋಗಿ ಮುಖ್ಯಮಂತ್ರಿ ಪಟ್ಟದ ಬೇಡಿಕೆಯೊಡ್ಡಿತ್ತು.
ಬಿಜೆಪಿಯೂ ಎನ್ಸಿಪಿ ಶಾಸಕರ ಜತೆಗೂಡಿ, ಸ್ವತಂತ್ರರ ಬೆಂಬಲಕ್ಕೂ ಪ್ರಯತ್ನಿಸುತ್ತಲೇ ಇತ್ತು. ಎನ್ಸಿಪಿ-ಕಾಂಗ್ರೆಸ್-ಶಿವಸೇನಾ ಪಕ್ಷಗಳು ಮಾತುಕತೆ ನಡೆಸುತ್ತಾ, ಅಧಿಕಾರಕ್ಕೇರಲು ಪ್ರಯತ್ನಿಸಿದ್ದವು. ಒಟ್ಟಾರೆ ಈ ಗೊಂದಲದ ಮಧ್ಯೆ, ಚಾಣಾಕ್ಷ ನಡೆಯಿಂದ ಬಿಜೆಪಿ ಹಾಗೂ ಎನ್ಸಿಪಿಯ ಅಜಿತ್ ಪವಾರ್ ಬಣ ಸೇರಿಕೊಂಡು, ಜತೆಗೆ ಸ್ವತಂತ್ರರ ಬೆಂಬಲದೊಂದಿಗೆ ಸರಕಾರ ರಚನೆ ಪ್ರಕ್ರಿಯೆಗೆ ಚಾಲನೆ ದೊರೆತೇಬಿಟ್ಟಿದೆ.
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ರಾಮ್ ವಿಲಾಸ್ ಪಾಸ್ವಾನ್, ಸಡಕ್ ಪರ್ ವಹೀ ಜಾನ್ವರ್ ಮರ್ತಾ ಹೈ, ಜೋ ನಿರ್ಣಯ್ ನಹೀಂ ಲೇತಾ ಹೈ ಕಿ ದಾಯೇಂ ಯಾ ಬಾಯೇಂ ಜಾಯೇಂ. ಅಂದರೆ, "ರಸ್ತೆ ಮಧ್ಯದಲ್ಲಿ ನಿಂತು ಎಡಕ್ಕೆ ಹೋಗಲೋ, ಬಲಕ್ಕೆ ಹೋಗಲೋ ಎಂದು ನಿರ್ಣಯ ತೆಗೆದುಕೊಳ್ಳಲಾಗದ ಹಸುವೇ (ಅಪಘಾತಕ್ಕೆ ಸಿಲುಕಿ) ಸಾಯುತ್ತದೆ".
ಈ ಮಾರ್ಮಿಕ ಟ್ವೀಟ್ಗೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ನಿರ್ಣಯ ತೆಗೆದುಕೊಳ್ಳುವಲ್ಲಿ ಎಡವಿರುವ ಎನ್ಸಿಪಿ-ಕಾಂಗ್ರೆಸ್ ಹಾಗೂ ಶಿವಸೇನಾಗೆ ತಟ್ಟುವಂತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.