ADVERTISEMENT

ನಾವು 162 ಶಾಸಕರಿದ್ದೇವೆ: ರಾಜ್ಯಪಾಲರನ್ನುದ್ದೇಶಿಸಿ ಸಂಜಯ್ ರಾವುತ್ ಟ್ವೀಟ್

ಮಹಾರಾಷ್ಟ್ರ ರಾಜಕೀಯ

ಏಜೆನ್ಸೀಸ್
Published 25 ನವೆಂಬರ್ 2019, 15:22 IST
Last Updated 25 ನವೆಂಬರ್ 2019, 15:22 IST
ಮುಂಬೈನ ಗ್ರ್ಯಾಂಡ್‌ ಹಯಾತ್‌ ಹೋಟೆಲ್‌ನಲ್ಲಿ ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್ ಶಾಸಕರ ಒಗ್ಗಟ್ಟು ಪ್ರದರ್ಶನ –ಎಎನ್‌ಐ ಚಿತ್ರ
ಮುಂಬೈನ ಗ್ರ್ಯಾಂಡ್‌ ಹಯಾತ್‌ ಹೋಟೆಲ್‌ನಲ್ಲಿ ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್ ಶಾಸಕರ ಒಗ್ಗಟ್ಟು ಪ್ರದರ್ಶನ –ಎಎನ್‌ಐ ಚಿತ್ರ   

ಮುಂಬೈ:ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಎನ್‌ಸಿಪಿಯ ಅಜಿತ್ ಪವಾರ್ ಬಣ ಸೇರಿ ಸರ್ಕಾರ ರಚಿಸಿರುವ ಬಳಿಕದ ರಾಜಕೀಯ ವಿದ್ಯಮಾನ ದಿನಕ್ಕೊಂದು ತಿರುವುಪಡೆಯುತ್ತಿದ್ದು, ಇದೀಗ ನಮ್ಮ ಬಳಿ 162 ಶಾಸಕರಿದ್ದಾರೆ ಎಂದು ಶಿವಸೇನಾ ವಕ್ತಾರ ಸಂಜಯ್ ರಾವುತ್ ಟ್ವೀಟ್ ಮಾಡಿದ್ದಾರೆ.

ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್ ಶಾಸಕರು ಮುಂಬೈನ ಗ್ರ್ಯಾಂಡ್‌ ಹಯಾತ್‌ ಹೋಟೆಲ್‌ನಲ್ಲಿ ತಂಗಿದ್ದಾರೆ. ಈ ಕುರಿತು ಮಹಾರಾಷ್ಟ್ರ ರಾಜ್ಯಪಾಲರನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ರಾವುತ್, ‘ನಾವೆಲ್ಲ ಜತೆಯಾಗಿದ್ದೇವೆ. ನಾವು 162 ಜನ ಒಟ್ಟಾಗಿರುವುದನ್ನುಗ್ರ್ಯಾಂಡ್‌ ಹಯಾತ್‌ ಹೋಟೆಲ್‌ನಲ್ಲಿ ಬಂದು ನೋಡಿ’ ಎಂದು ಉಲ್ಲೇಖಿಸಿದ್ದಾರೆ.

ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಒಬ್ಬೊಬ್ಬ ಶಾಸಕರಿಗೂ ಭಾರಿ ಮಹತ್ವ ಇದೆ. ಹಾಗಾಗಿ, ಬಿಜೆಪಿ ಮತ್ತು ಅಜಿತ್‌ ಪವಾರ್‌ ಅವರ ಸೆಳೆತಕ್ಕೆ ಒಳಗಾಗದಂತೆ ಶಾಸಕರನ್ನು ಕಾಯಲು ಮೂರೂ ಪಕ್ಷಗಳು ಭಾರಿ ಕಸರತ್ತು ನಡೆಸುತ್ತಿವೆ.

ADVERTISEMENT

ಬಲಾಬಲದ ತಕ್ಕಡಿ ಯಾರತ್ತ ವಾಲಬೇಕು ಎಂಬುದರಲ್ಲಿ ಪಕ್ಷೇತರ ಶಾಸಕರು ಮತ್ತು ಸಣ್ಣ ಪಕ್ಷಗಳ ಶಾಸಕರು ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳುತ್ತಿವೆ. ಈ ಗುಂಪಿನ ಶಾಸಕರ ಸಂಖ್ಯೆ 29. 288 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 105, ಶಿವಸೇನಾ 56, ಎನ್‌ಸಿಪಿ 54 ಮತ್ತು ಕಾಂಗ್ರೆಸ್‌ 44 ಸದಸ್ಯರನ್ನು ಹೊಂದಿವೆ.

ಮಹಾರಾಷ್ಟ್ರದಲ್ಲಿ ಜಾರಿಯಾಗಿದ್ದ ರಾಷ್ಟ್ರಪತಿ ಆಡಳಿತವನ್ನು ಏಕಾಏಕಿ ಅಂತ್ಯಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರ ಮತ್ತು ಸರ್ಕಾರ ರಚನೆ ಮಾಡಲು ಬಿಜೆಪಿ ಅವಕಾಶ ನೀಡಿದ ರಾಜ್ಯಪಾಲರ ನಡೆ ಪ್ರಶ್ನಿಸಿ ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ವಿಚಾರಣೆ ಮುಕ್ತಾಯಗೊಳಿಸಿರುವ ಸರ್ವೋಚ್ಚ ನ್ಯಾಯಾಲಯ ತೀರ್ಪನ್ನು ಮಂಗಳವಾರಕ್ಕೆ ಕಾಯ್ದಿರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.