ಮುಂಬೈ (ಮಹಾರಾಷ್ಟ್ರ): ಕೊರೊನಾ ಸೋಂಕು ತೀವ್ರವಾಗಿರುವ ಮುಂಬೈನಲ್ಲಿ ಪರಿಸ್ಥಿತಿ ತೀರಾ ಹದೆಗೆಟ್ಟಿರುವ ಕಾರಣ ಲಾಕ್ ಡೌನ್ ಅನ್ನು ಮೇ 31ರವರೆಗೆ ವಿಸ್ತರಿಸಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾನುವಾರ ಆದೇಶ ಹೊರಡಿಸಿದ್ದಾರೆ.
ಇಡೀ ರಾಜ್ಯಕ್ಕೆ ಲಾಕ್ ಡೌನ್ ಅನ್ವಯಿಸಲಿದ್ದು, ಲಾಕ್ ಡೌನ್ ಸಡಿಲಿಕೆ, ತೆರವುಗೊಳಿಸುವ ಕುರಿತು ಅತಿ ಶೀಘ್ರದಲ್ಲಿಯೇ ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಲಾಕ್ ಡೌನ್ ಅವಧಿ ಇಂದು ಸಂಜೆ ಅಂತ್ಯಗೊಳ್ಳುತ್ತಿದ್ದ ಕಾರಣ ಮಧ್ಯಾಹ್ನದ ನಂತರ ಮುಖ್ಯಮಂತ್ರಿ ಈ ಆದೇಶ ಹೊರಡಿಸಿದ್ದಾರೆ. ದೇಶದಲ್ಲಿ ವರದಿಯಾಗಿರುವ ಕೋವಿಡ್ 19 ಪ್ರಕರಣಗಳಲ್ಲಿ ಮೂರನೆ ಒಂದು ಭಾಗದಷ್ಟುಮಹಾರಾಷ್ಟ್ರದಲ್ಲೇ ಕಾಣಿಸಿಕೊಂಡಿದೆ.
ಕೊರೊನಾ ಸೋಂಕು ದೃಢಪಟ್ಟಿರುವ ಪ್ರಕರಣಗಳು ಮಹಾರಾಷ್ಟ್ರದಲ್ಲಿ 30 ಸಾವಿರ ದಾಟಿದೆ. ಶನಿವಾರ ಒಂದೇ ದಿನದಲ್ಲಿ 1, 606 ಪ್ರಕರಣಗಳು ದಾಖಲಾಗಿವೆ. ಕೇವಲ ಮುಂಬೈಯಲ್ಲಿಯೇ
ಒಂದೇ ದಿನದಲ್ಲಿ 884 ಪ್ರಕರಣಗಳು ದೃಢಪಟ್ಟಿವೆ. ಒಟ್ಟು ಪ್ರಕರಣಗಳು ಮುಂಬೈನಲ್ಲಿಯೇ 18,555ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದಲ್ಲಿಯೇ ಕೊರೊನಾ ಪೀಡಿತರ ಸಂಖ್ಯೆ ಮೇ ಅಂತ್ಯದ ವೇಳೆಗೆ 50 ಸಾವಿರ ತಲುಪುವ ನಿರೀಕ್ಷೆ ಇದೆ ಎಂದು ಆರೋಗ್ಯಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.ಇದರಲ್ಲಿ ಮುಂಬೈ ನಗರದಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ಇರಲಿವೆ ಎನ್ನಲಾಗಿದೆ.
ಈ ಸಂಬಂಧ ಕೇಂದ್ರದಿಂದ ಆರ್ಥಿಕ ನೆರವು ಘೋಷಿಸಬೇಕೆಂದು ಮಹಾರಾಷ್ಟ್ರ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.