ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವು ದೇವಾಲಯಗಳ ಜೀರ್ಣೋದ್ಧಾರ ಯೋಜನೆಗೆ ಒಪ್ಪಿಗೆ ನೀಡಿದೆ.
ಲಾಕ್ಡೌನ್ನಿಂದಾಗಿ ಮುಚ್ಚಲಾಗಿದ್ದ ದೇವಾಲಯಗಳನ್ನು ಪುನಃ ತೆರೆಯುವಲ್ಲಿ ಮಹಾರಾಷ್ಟ್ರ ಸರ್ಕಾರ ವಿಳಂಬ ಮಾಡಿದೆ ಎಂದು ಈ ಹಿಂದೆ ಬಿಜೆಪಿ ಟೀಕಿಸಿತ್ತು. ಇದರಿಂದಾಗಿ ಸರ್ಕಾರದ ಈಗಿನ ಕ್ರಮಕ್ಕೆ ರಾಜಕೀಯ ಮಹತ್ವ ಬಂದಿದೆ.
ಮಹಾರಾಷ್ಟ್ರ ಸರ್ಕಾರವು 2021–22ರ ವಾರ್ಷಿಕ ಬಜೆಟ್ನಲ್ಲಿ ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ₹101 ಕೋಟಿ ಮೀಸಲಿಟ್ಟಿದೆ. ಅಲ್ಲದೆ ಇದಕ್ಕಾಗಿ ಮುಖ್ಯ ಕಾರ್ಯದರ್ಶಿ ಸಂಜಯ್ ಕುಮಾರ್ ಅವರ ನೇತೃತ್ವದಲ್ಲಿ 9 ಮಂದಿಯ ಸಮಿತಿಯನ್ನು ಕೂಡ ರಚಿಸಿದೆ.
ಇತ್ತೀಚಿಗೆ ನಡೆದ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಹಳೆಯ ದೇವಾಲಯಗಳ ಜೀರ್ಣೋದ್ಧಾರದ ಯೋಜನೆ ಬಗ್ಗೆ ಉದ್ಧವ್ ಠಾಕ್ರೆ ಅವರು ಮಾಹಿತಿ ನೀಡಿದ್ದರು. ಬುಧವಾರ ನಡೆದ ಸಚಿವ ಸಂಪುಟ ಸಭೆಈ ಯೋಜನೆಗೆ ಅನುಮೋದನೆ ನೀಡಿದೆ.
ಹಣಕಾಸು, ಲೋಕೋಪಯೋಗಿ, ಪ್ರವಾಸೋದ್ಯಮ, ಪರಿಸರ, ಇಲಾಖೆಯ ಅಧಿಕಾರಿಗಳು ಅಲ್ಲದೆ ಸರ್ ಜೆಜೆ ಕಾಲೇಜ್ ಆಫ್ ಆರ್ಕಿಟೆಕ್ಚರ್ನ ಡೀನ್, ಪುರಾತತ್ವ ಮತ್ತು ವಸ್ತು ಸಂಗ್ರಹಾಲಯಗಳ ನಿರ್ದೇಶನಾಲಯದ ನಿರ್ದೇಶಕರು, ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರು ಸಮಿತಿಯಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.