ADVERTISEMENT

‌ಪಶ್ಚಿಮ ಬಂಗಾಳ | ಕೂಚ್‌ಬಿಹಾರ್‌ ಘರ್ಷಣೆ: ಶಾ ರಾಜೀನಾಮೆಗೆ ಮಮತಾ ಒತ್ತಾಯ

ಸಿಐಎಸ್‌ಎಫ್‌ ಹಾರಿಸಿದ ಗುಂಡಿಗೆ ಐವರ ಸಾವು ಪ್ರಕರಣ

ಪಿಟಿಐ
Published 10 ಏಪ್ರಿಲ್ 2021, 9:21 IST
Last Updated 10 ಏಪ್ರಿಲ್ 2021, 9:21 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಹಿಂಗಲ್‌ಗಂಜ್: ಸಿತಾಲ್‌ಕುಚಿಯಲ್ಲಿ ಮತಚಲಾಯಿಸಲು ಸರದಿಯಲ್ಲಿ ನಿಂತಿದ್ದ ಜನರ ಮೇಲೆ ಕೇಂದ್ರೀಯ ಕೈಗಾರಿಕೆ ಭದ್ರತಾ ಪಡೆ (ಸಿಐಎಸ್‌ಎಫ್‌) ಯೋಧರು ಗುಂಡು ಹಾರಿಸಿ ಐವರ ಹತ್ಯೆ ಮಾಡಿದ್ದಾರೆಂದು ಆರೋಪಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಈ ಘಟನೆಗೆ ಸಂಬಂಧಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ.

ಇಲ್ಲಿ ಶನಿವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ‘ಕೂಚ್‌ಬಿಹಾರ್ ಜಿಲ್ಲೆಯ ಸಿತಾಲ್‌ಕುಚಿಯಲ್ಲಿಮತದಾನದ ವೇಳೆ ಸಿಐಎಸ್‌ಎಫ್‌ ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಮೃತರಾಗಿದ್ದಾರೆ. ‌ಈ ಘಟನೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿವರಣೆ ನೀಡಬೇಕು‘ ಎಂದು ಒತ್ತಾಯಿಸಿದರು.

‘ಮತದಾನಕ್ಕಾಗಿ ಸರದಿಯಲ್ಲಿ ನಿಂತಿದ್ದವರ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಬಹಳ ಸಮಯದಿಂದ ಕೇಂದ್ರೀಯ ಪಡೆಗಳು ಉನ್ನತ ಮಟ್ಟದ ಅಧಿಕಾರಿಗಳ ಕೈಗೊಂಬೆಗಳಂತೆ ವರ್ತಿಸುತ್ತಿವೆ. ಬಿಜೆಪಿಗೆ ಈಗಾಗಲೇ ತಾನು ಸೋಲುತ್ತಿದ್ದೇನೆಂದು ಭಯ ಕಾಡುತ್ತಿದೆ. ಹೀಗಾಗಿ ಮತದಾರರನ್ನು ಕೊಲ್ಲಲು ಸಂಚು ರೂಪಿಸುತ್ತಿದೆ‘ ಎಂದು ಬ್ಯಾನರ್ಜಿ ಆರೋಪಿಸಿದರು.

ADVERTISEMENT

ಸಿತಾಲ್‌ಕುಚಿಯಲ್ಲಿ ನಡೆದ ಘಟನೆ ಕೂಡ ಕೇಂದ್ರ ಗೃಹ ಸಚಿವರು ನಡೆಸಿದ ಪಿತೂರಿಯ ಭಾಗವಾಗಿದೆ ಎಂದು ಅವರು ಆರೋಪಿಸಿದರು. ಆದರೂ ಎಲ್ಲರೂ ಶಾಂತತೆ ಕಾಪಾಡಿ. ಶಾಂತಿಯುತವಾಗಿ ಮತ ಚಲಾಯಿಸಿ. ಅವರನ್ನು (ಬಿಜೆಪಿ ಅಭ್ಯರ್ಥಿಗಳನ್ನು) ಸೋಲಿಸುವ ಮೂಲಕ ಜನರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಿ‘ ಎಂದು ಮಮತಾ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.