ಕೋಲ್ಕತ್ತ: ‘ಅಧಿಕಾರಿ (ಶಿಶಿರ್ ಅಧಿಕಾರಿ ಹಾಗೂ ಸುವೇಂದು ಅಧಿಕಾರಿ) ಕುಟುಂಬದವರ ನಿಜವಾದ ಮುಖವನ್ನು ಗುರುತಿಸುವಲ್ಲಿ ವಿಫಲಳಾಗಿರುವ ನಾನು ಒಬ್ಬ ದೊಡ್ಡ ಕತ್ತೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕಾಂತಿ ದಕ್ಷಿಣದಲ್ಲಿ ಆಯೋಜಿಸಿದ್ದ ಪ್ರಚಾರ ರ್ಯಾಲಿಯಲ್ಲಿ, ಅಧಿಕಾರಿ ಕುಟುಂಬದ ಮೇಲೆ ವಾಗ್ದಾಳಿ ನಡೆಸಿದ ಮಮತಾ, ‘ತಪ್ಪು ನನ್ನದೇ. ಅಧಿಕಾರಿ ಕುಟುಂಬವು ₹5,000 ಕೋಟಿ ಮೌಲ್ಯದ ಸಾಮ್ರಾಜ್ಯವನ್ನು ಕಟ್ಟಿದೆ ಎಂಬ ವದಂತಿಗಳನ್ನು ಕೇಳಿದ್ದೇನೆ. ನಾನು ಅಧಿಕಾರಕ್ಕೆ ಮರಳಿ ಬರುತ್ತಿದ್ದಂತೆಯೇ ಈ ವಿಚಾರವಾಗಿ ತನಿಖೆ ನಡೆಸುತ್ತೇನೆ’ ಎಂದರು. ‘ಅವರು ₹ 5,000 ಕೋಟಿ ಮೌಲ್ಯದ ಸಾಮ್ರಾಜ್ಯ ಹೊಂದಿದ್ದಾರೆ ಎಂದು ಜನರು ಹೇಳುತ್ತಾರೆ. ಇದಕ್ಕಿಂತ ಹೆಚ್ಚಿನದೇನೂ ನನಗೆ ಗೊತ್ತಿಲ್ಲ. ಮತಗಳನ್ನು ಖರೀದಿಸಲು ಅವರು ಹಣವನ್ನು ಬಳಸಬಹುದು. ಆದರೆ ಅವರಿಗೆ ಮತ ನೀಡಬೇಡಿ’ ಎಂದು ಮಮತಾ ಮನವಿ ಮಾಡಿದರು.
ಬಿಜೆಪಿ ಸೇರಿದ ಶಿಶಿರ್ ಅಧಿಕಾರಿ
ಟಿಎಂಸಿಯ ಹಿರಿಯ ಮುಖಂಡ, ಸಂಸದ ಹಾಗೂ ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ ಸುವೇಂದು ಅಧಿಕಾರಿ ಅವರ ತಂದೆ ಶಿಶಿರ್ ಅಧಿಕಾರಿ ಭಾನುವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರಿದ ನಂತರ ಮಾತನಾಡಿದ ಅವರು, ‘ಬಹಳ ಕಷ್ಟಪಟ್ಟು ಟಿಎಂಸಿಯಲ್ಲಿ ನಾವು ಉನ್ನತ ಮಟ್ಟಕ್ಕೆ ಏರಿದ್ದೆವು. ಆದರೆ, ನನ್ನನ್ನು ಮತ್ತು ನನ್ನ ಮಗನನ್ನು ಪಕ್ಷ ನಡೆಸಿಕೊಂಡ ರೀತಿ ಸರಿಯಾಗಿರಲಿಲ್ಲ. ಇದರಿಂದ ಟಿಎಂಸಿಯನ್ನು ತ್ಯಜಿಸುವುದು ಅನಿವಾರ್ಯವಾಗಿದೆ’ ಎಂದರು.
‘ನಮ್ಮಿಬ್ಬರನ್ನು ಪಕ್ಷದಿಂದ ಹೇಗೆ ಹೊರಗೆ ತಳ್ಳಲಾಗಿದೆ ಎಂಬುದು ಇತಿಹಾಸದಲ್ಲಿ ದಾಖಲಾಗಲಿದೆ. ಬಂಗಾಳದಲ್ಲಿ ಎದುರಾಗುವ ಎಲ್ಲಾ ರಾಜಕೀಯ ದಾಳಿಗಳು ಹಾಗೂ ದೌರ್ಜನ್ಯಗಳನ್ನು ಎದುರಿಸಿ ನಾವು ಯಶಸ್ವಿಯಾಗುತ್ತೇವೆ’ ಎಂದ ಅವರು, ಜೈ ಶ್ರೀರಾಮ್ ಮತ್ತು ಭಾರತ ಮಾತಾ ಕಿ ಜೈ ಘೋಷಣೆಗಳನ್ನು ಕೂಗಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.