ADVERTISEMENT

ಮುಂದುವರಿದ ಮಮತಾ ಧರಣಿ; ಲೋಕಸಭೆಯಲ್ಲಿ ಪ್ರತಿಧ್ವನಿಸಿದ ಬಿಜೆಪಿ ಹಟಾವೋ ಘೋಷಣೆ 

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2019, 7:07 IST
Last Updated 4 ಫೆಬ್ರುವರಿ 2019, 7:07 IST
   

ಕೋಲ್ಕತ್ತ: ಕೋಲ್ಕತ್ತ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನು ಸಿಬಿಐ ವಿಚಾರಣೆ ನಡೆಸಲು ಮುಂದಾಗಿರುವ ಕ್ರಮವನ್ನು ಖಂಡಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡೆಸುತ್ತಿರುವಧರಣಿ ಸತ್ಯಾಗ್ರಹ ಮುಂದುವರಿದಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಪಶ್ಚಿಮ ಬಂಗಾಳದ ಆಡಳಿತದ ಮೇಲೆ ನಡೆಸುತ್ತಿರುವ ದಾಳಿ ಇದು ಎಂದು ಮಮತಾ ಆರೋಪಿಸಿದ್ದಾರೆ.

ಈ ಸಮಸ್ಯೆಪರಿಹಾರಗೊಳ್ಳುವವರೆಗೆ ತಾನು ಧರಣಿ ಸತ್ಯಾಗ್ರಹ ಮುಂದುವರಿಸುವುದಾಗಿ ಮಮತಾ ಹೇಳಿದ್ದಾರೆ.

ಕ್ಷಣ ಕ್ಷಣದ ಸುದ್ದಿ

ಲೋಕಸಭೆಯಲ್ಲಿ ಪ್ರತಿಧ್ವನಿಸಿದ ಬಿಜೆಪಿ ಹಟಾವೋ ಘೋಷಣೆ
ಸಿಬಿಐ ಮತ್ತು ಮಮತಾ ಬ್ಯಾನರ್ಜಿ ಸರ್ಕಾರದ ನಡುವಿನ ಜಟಾಪಟಿ ಸೋಮವಾರ ಲೋಕಸಭೆಯಲ್ಲಿಯೂ ಪ್ರತಿಧ್ವನಿಸಿದೆ. ಟಿಎಂಸಿ ಸದಸ್ಯರು ಬಿಜೆಪಿ ಹಟಾವೋ ಎಂದು ಘೋಷಣೆ ಕೂಗಿದ್ದು, ರಾಜ್ಯಸಭಾ ಕಲಾಪ ಒಂದು ದಿನಕ್ಕೆ ಮುಂದೂಡಿದ್ದು, ಲೋಕ ಸಭಾ ಕಲಾಪವನ್ನು ಮಧ್ಯಾಹ್ನ 12 ಗಂಟೆ ವರೆಗೆ ಮುಂದೂಡಲಾಯಿತು.

ರಾಜ್ಯಪಾಲರಿಗೆ ಕರೆ ಮಾಡಿದ ಗೃಹ ಸಚಿವ
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪಶ್ಚಿಮ ಬಂಗಾಳದ ರಾಜ್ಯಪಾಲ ಕೇಶರಿ ನಾಥ್ ತ್ರಿಪಾಠಿಯವರಿಗೆ ಕರೆ ಮಾಡಿ, ಸಿಬಿಐ ಅಧಿಕಾರಗಳ ಜತೆ ಪೊಲೀಸರ ಅನುಚಿತ ವರ್ತನೆ ನಡೆದಿರುವ ಘಟನೆ ವಿಚಾರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಅಖಿಲೇಶ್ ಬೆಂಬಲ
ಮಮತಾ ಅವರು ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಘೋಷಿಸಿರುವ ಅಖಿಲೇಶ್ ಯಾದವ್, ಧರಣಿ ವೇದಿಕೆಗೆ ಸಮಾಜವಾದಿ ಪಕ್ಷದ ನಾಯಕ ಕಿರಣ್ಮಯಿ ನಂದ ಅವರನ್ನು ಕಳುಹಿಸಿದ್ದಾರೆ.

ಸಂವಿಧಾನವನ್ನು ರಕ್ಷಿಸಬೇಕಿದೆ:ಡೆರೆಕ್‌ ಒ ಬ್ರಯಾನ್‌
ನಾವು ವಿಪಕ್ಷಗಳೊಂದಿಗೆ ಮಾತನಾಡಿದ್ದೇವೆ. ನಾವೆಲ್ಲರೂ ಜತೆಯಾಗಿ ಮುಂದೆ ಸಾಗಬೇಕು. ನಾವು ನಮ್ಮ ಸಂವಿಧಾನ, ನಮ್ಮ ದೇಶ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಕಾಪಾಡಬೇಕಿದೆ.ನಾಳೆ, ಎಲ್ಲ ವಿಪಕ್ಷಗಳು ಚುನಾವಣಾ ಆಯೋಗವನ್ನು ಸಮೀಪಿಸಲಿವೆ ಎಂದು ಟಿಎಂಸಿ ನಾಯಕ ಡೆರೆಕ್‌ ಒ ಬ್ರಯಾನ್‌ ಲೋಕಸಭೆಯಲ್ಲಿ ಹೇಳಿದ್ದಾರೆ.

ಪ್ರಧಾನ ಕಾರ್ಯದರ್ಶಿ, ಡಿಜಿಪಿ ಜತೆ ರಾಜ್ಯಪಾಲರ ಸಭೆ
ಪ್ರಧಾನ ಕಾರ್ಯದರ್ಶಿ ಮಲಯ್ ಡೇ ಮತ್ತು ಡಿಜಿಪಿ ವಿರೇಂದ್ರ ಕುಮಾರ್ ಅವರನ್ನು ರಾಜ್ಯಪಾಲ ಕೇಶರಿ ನಾಥ್ ತ್ರಿಪಾಠಿ ತಮ್ಮ ನಿವಾಸಕ್ಕೆ ಕರೆದು ಅಲ್ಲಿ ಸಭೆ ನಡೆಸಿದ್ದಾರೆ.

ದೆಹಲಿಯಲ್ಲಿ ವಿಪಕ್ಷ ನಾಯಕರ ಜತೆ ಚರ್ಚೆ: ನಾಯ್ಡು
ದೆಹಲಿಯಲ್ಲಿ ಸೋಮವಾರ ವಿಪಕ್ಷ ನಾಯಕರ ಜತೆ ಚರ್ಚೆ ನಡೆಸಿ ದೇಶದಾದ್ಯಂತ ಚಳವಳಿ ನಡೆಸಲು ಯೋಜನೆ ಹೂಡಲಿದ್ದೇವೆ.ಟಿಡಿಪಿ ಸಂಸದರು ವಿಪಕ್ಷ ನೇತಾರರೊಂದಿಗೆ ಸೇರಿ ಪ್ರತಿಭಟಿಸಲಿದ್ದಾರೆ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥ ಎನ್. ಚಂದ್ರ ಬಾಬು ನಾಯ್ಡು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.