ADVERTISEMENT

ಬಿಎಸ್‌ಎಫ್‌ಗೆ ಅಧಿಕಾರ ಕೊಟ್ಟು ಒಕ್ಕೂಟ ವ್ಯವಸ್ಥೆ ಹಾಳುಗೆಡವದಿರಿ: ಮಮತಾ

ಕೇಂದ್ರ ಹಣ ಕೊಡದಿದ್ದರೆ ರಾಜ್ಯ ನಡೆಸುವುದು ಹೇಗೆ?: ಮಮತಾ

ಪಿಟಿಐ
Published 24 ನವೆಂಬರ್ 2021, 20:15 IST
Last Updated 24 ನವೆಂಬರ್ 2021, 20:15 IST
ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಬುಧವಾರ ಭೇಟಿಯಾದರು -–ಪಿಟಿಐ ಚಿತ್ರ
ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಬುಧವಾರ ಭೇಟಿಯಾದರು -–ಪಿಟಿಐ ಚಿತ್ರ   

ನವದೆಹಲಿ:ಬಿಎಸ್‌ಎಫ್‌ಗೆ ಹೆಚ್ಚಿನ ಅಧಿಕಾರ ನೀಡಿದರೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರೊಂದಿಗೆ ಘರ್ಷಣೆ ಹೆಚ್ಚುತ್ತದೆ. ದೇಶದಲ್ಲಿನ ಒಕ್ಕೂಟ ವ್ಯವಸ್ಥೆಯನ್ನು ಯಾವುದೇ ಕಾರಣಕ್ಕೂ ಹಾಳು ಮಾಡಬಾರದು ಎಂದುಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿದ್ದಾರೆ.

ಮಮತಾ ಅವರು ಪ್ರಧಾನಿ ಮೋದಿ ಅವರನ್ನುಸೋಮವಾರ ಭೇಟಿ ಮಾಡಿದರು. ರಾಜ್ಯದಲ್ಲಿ ಗಡಿ ಭದ್ರತಾ ಪಡೆಯ ಕಾರ್ಯವ್ಯಾಪ್ತಿಗೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳ ಬಗ್ಗೆ ಅವರು ಪ್ರಧಾನಿ ಜತೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ಜಾಗತಿಕ ವಾಣಿಜ್ಯ ಸಮ್ಮೇಳನದ ಉದ್ಘಾಟನೆಗೆ ಪ್ರಧಾನಿಯನ್ನು ಅವರು ಆಹ್ವಾನಿಸಿದ್ದಾರೆ.

‘ಕೇಂದ್ರ ಸರ್ಕಾರದಿಂದ ಪಶ್ಚಿಮ ಬಂಗಾಳ ಸರ್ಕಾರಕ್ಕೆ ₹96,655 ಕೋಟಿ ಬರಬೇಕಿದೆ. ಕೇಂದ್ರದಿಂದ ಬರಬೇಕಿರುವ ಹಣ ಬರದಿದ್ದರೆ, ರಾಜ್ಯವನ್ನು ನಡೆಸುವುದಾದರೂ ಹೇಗೆ ಎಂದು ಪ್ರಧಾನಿಯನ್ನು ಪ್ರಶ್ನಿಸಿದ್ದೇನೆ. ನಮ್ಮ ಸಿದ್ಧಾಂತಗಳು ಬೇರೆ ಇರಬಹುದು, ಆದರೆ ಅದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಂಬಂಧವನ್ನು ಬಾಧಿಸಬಾರದು. ರಾಜ್ಯಗಳು ಅಭಿವೃದ್ಧಿಯಾದರಷ್ಟೇ ದೇಶ ಅಭಿವೃದ್ಧಿಯಾಗುತ್ತದೆ’ ಎಂದು ಅವರು ಪ್ರಧಾನಿ ಭೇಟಿಯ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

ADVERTISEMENT

‘ಸೋನಿಯಾರನ್ನು ಭೇಟಿಯಾಗುವುದು ಕಡ್ಡಾಯವೇ?’:
‘ಇಲ್ಲಿಗೆ ಬಂದಾಗಲೆಲ್ಲಾ ಸೋನಿಯಾ ಅವರನ್ನು ಭೇಟಿಯಾಗಲೇಬೇಕೆ? ಸಂವಿಧಾನದಲ್ಲಿ ಅದನ್ನು ಕಡ್ಡಾಯ ಮಾಡಲಾಗಿದೆಯೇ’ ಎಂದು ಮಮತಾ ಪ್ರಶ್ನಿಸಿದ್ದಾರೆ.ದೆಹಲಿಗೆ ಬಂದಾಗ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಏಕೆ ಭೇಟಿ ಮಾಡಲಿಲ್ಲ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ
ಮಮತಾ ಹೀಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.