ಪಣಜಿ(ಗೋವಾ): ದಾದಾಗಿರಿ ಮಾಡಲು ಕೇಂದ್ರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಹೇಳಿದರು.
ಗೋವಾದಲ್ಲಿ ಟಿಎಂಸಿ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು, 'ನಾನು ನಿಮ್ಮ ಸಹೋದರಿ ಇದ್ದಂತೆ. ಅಧಿಕಾರ ಹಿಡಿಯಲು ನಾನು ಇಲ್ಲಿಗೆ ಬಂದಿಲ್ಲ. ಜನರು ತೊಂದರೆಯನ್ನು ಎದುರಿಸುತ್ತಿರುವಾಗ ಸಹಾಯ ಮಾಡಿದರೆ ಅದು ನನ್ನ ಹೃದಯವನ್ನು ತಲುಪುತ್ತದೆ. ನಿಮ್ಮ ಕೆಲಸವನ್ನು ನೀವು ಮಾಡುತ್ತೀರಿ. ಆ ಪ್ರಕ್ರಿಯೆಯಲ್ಲಿ ನಾನು ನಿಮಗೆ ಸಹಾಯವನ್ನಷ್ಟೇ ಮಾಡಲು ಬಯಸುತ್ತೇನೆ' ಎಂದು ಪಶ್ಚಿಮ ಬಂಗಾಳ ಸಿಎಂ ಹೇಳಿದ್ದಾರೆ.
'ಬಂಗಾಳ ಬಹಳ ಬಲಿಷ್ಠ ರಾಜ್ಯವಾಗಿದೆ. ಭವಿಷ್ಯದಲ್ಲಿ ಗೋವಾ ಪ್ರಬಲ ರಾಜ್ಯವಾಗಲಿದೆ. ನಾವು ಗೋವಾದ ಹೊಸ ಉದಯವನ್ನು ನೋಡಲು ಬಯಸುತ್ತೇವೆ' ಎಂದು ತಿಳಿಸಿದರು.
‘ಮಮತಾ ಜೀ ಬಂಗಾಳದವರು. ಗೋವಾದಲ್ಲಿ ಏನು ಮಾಡುತ್ತಾರೆ ಎಂದು ಯಾರೋ ಪ್ರಶ್ನಿಸುತ್ತಿದ್ದಾರೆ. ನಾನು ಭಾರತೀಯಳು. ನಾನು ಎಲ್ಲಿ ಬೇಕಾದರೂ ಹೋಗಬಹುದು. ನೀವೂ ಸಹ ಎಲ್ಲಿ ಬೇಕಾದರೂ ಹೋಗಬಹುದು' ಎಂದು ಟಿಎಂಸಿ ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು.
'ನಾನು ಜಾತ್ಯತೀತತೆಯನ್ನು ನಂಬುತ್ತೇನೆ. ನನಗೆ ಏಕತೆಯಲ್ಲಿ ವಿಶ್ವಾಸವಿದೆ. ಬಂಗಾಳವು ನನ್ನ ಮಾತೃಭೂಮಿಯಾದರೆ, ಗೋವಾ ಸಹ ನನ್ನ ಮಾತೃಭೂಮಿಯಾಗಿದೆ' ಎಂದು ಮಮತಾ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.