ADVERTISEMENT

ವಿದ್ಯುತ್ ತಿದ್ದುಪಡಿ ಮಸೂದೆ ವಿರುದ್ಧ ಪ್ರಧಾನಿಗೆ ಪತ್ರ ಬರೆದ ಮಮತಾ ಬ್ಯಾನರ್ಜಿ

ಪಿಟಿಐ
Published 7 ಆಗಸ್ಟ್ 2021, 16:46 IST
Last Updated 7 ಆಗಸ್ಟ್ 2021, 16:46 IST
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ   

ಕೋಲ್ಕತಾ: ವಿದ್ಯುತ್ (ತಿದ್ದುಪಡಿ) ಮಸೂದೆ 2020 ಅನ್ನು ಸಂಸತ್ತಿನಲ್ಲಿ ಮಂಡಿಸುತ್ತಿರುವ ಕೇಂದ್ರದ ಕ್ರಮವನ್ನು ವಿರೋಧಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, 'ಜನವಿರೋಧಿ' ಮಸೂದೆಯನ್ನು ಜಾರಿಗೆ ತರಬಾರದು ಎಂದು ಪ್ರಧಾನಿಗೆ ಒತ್ತಾಯಿಸಿದ್ದಾರೆ.

'ಈ ವಿಷಯದ ಬಗ್ಗೆ ವಿಸ್ತೃತ ಮತ್ತು ಪಾರದರ್ಶಕ ಚರ್ಚೆಗೆ ಆದಷ್ಟು ಬೇಗ ಅವಕಾಶ ನೀಡಿ. ಹೆಚ್ಚು ಟೀಕೆಗೊಳಗಾದ ಕೇಂದ್ರ ಸರ್ಕಾರದ ವಿದ್ಯುತ್ (ತಿದ್ದುಪಡಿ) ಮಸೂದೆ 2020 ವಿರುದ್ಧ ವಿರೋಧವನ್ನು ವ್ಯಕ್ತಪಡಿಸಲು ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ' ಎಂದಿದ್ದಾರೆ.

'ಕಳೆದ ವರ್ಷವೇ ಈ ಮಸೂದೆಯನ್ನು ಮಂಡಿಸುವ ಪ್ರಸ್ತಾಪವಿತ್ತು. ಆದರೆ ನಮ್ಮಲ್ಲಿ ಹಲವರು ಕರಡು ಶಾಸನದ ಜನವಿರೋಧಿ ಅಂಶಗಳನ್ನು ಒತ್ತಿಹೇಳಿದ್ದರು ಮತ್ತು ನಾನು ಜೂನ್ 12, 2020 ರಂದು ನಿಮಗೆ ಬರೆದ ಪತ್ರದಲ್ಲಿಯೂ ಈ ಮಸೂದೆಯ ಎಲ್ಲಾ ಪ್ರಮುಖ ಅಪಾಯಗಳನ್ನು ವಿವರಿಸಿದ್ದೇನೆ' ಎಂದು ಪಶ್ಚಿಮ ಬಂಗಾಳ ಸಿಎಂ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಮಮತಾ ಬ್ಯಾನರ್ಜಿ ಅವರು ಕಳೆದ ವರ್ಷ ಜೂನ್ 12 ರಂದು ಪ್ರಧಾನಿ ಮೋದಿಗೆ ಪತ್ರ ಬರೆದು, ಇದು ದೇಶದ ಒಕ್ಕೂಟ ವ್ಯವಸ್ಥೆಯನ್ನು 'ನಾಶಪಡಿಸುವ' ಕೇಂದ್ರದ ಪ್ರಯತ್ನ ಎಂದು ಕರಡು ವಿದ್ಯುತ್ (ತಿದ್ದುಪಡಿ) ಮಸೂದೆ 2020ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಮಸೂದೆಯು ಇಡೀ ರಾಜ್ಯದ ವಿದ್ಯುತ್ ಗ್ರಿಡ್ ಅನ್ನು ರಾಷ್ಟ್ರೀಯ ಗ್ರಿಡ್‌‌ನ ಭಾಗವಾಗಿ ಮಾಡುವ ಗುರಿ ಹೊಂದಿದೆ. ನಮ್ಮ ವಿರೋಧಗಳನ್ನು ಪರಿಗಣಿಸದೆ ಮಸೂದೆಯನ್ನು ಮರಳಿ ತರಲಾಗುತ್ತಿದೆ ಎಂಬುದನ್ನು ಕೇಳಿದಾಗ ನಾನು ದಿಗ್ಭ್ರಮೆಗೊಂಡಿದ್ದೇನೆ ಮತ್ತು ವಾಸ್ತವವಾಗಿ ಈ ಮಸೂದೆಯು ಜನವಿರೋಧಿ ಅಂಶಗಳೊಂದಿಗೆ ಬರುತ್ತಿದೆ' ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.