ADVERTISEMENT

ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಮಣಿಪುರ ಮುಖ್ಯಮಂತ್ರಿ ಅಣ್ಣನನ್ನು ಅಪಹರಿಸಿದರು!

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 14:00 IST
Last Updated 14 ಡಿಸೆಂಬರ್ 2019, 14:00 IST
   

ಕೋಲ್ಕತ್ತ: ಸಿಬಿಐ ಅಧಿಕಾರಿಗಳೆಂದು ಹೇಳಿಕೊಂಡು ಅಪಾರ್ಟ್‌‌ಮೆಂಟ್‌ಗೆ ನುಗ್ಗಿದ ಐವರು ವ್ಯಕ್ತಿಗಳು ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಅಣ್ಣ ಟೋಂಗ್‌ಬ್ರಾಮ್ ಲುಖೋಯ್ ಸಿಂಗ್ ಅವರನ್ನು ಅಪಹರಿಸಿರುವ ಘಟನೆ ಕೋಲ್ಕತ್ತದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಾದ ಕೆಲವೇ ಗಂಟಗೆಳಲ್ಲಿ ಪೊಲೀಸರು ಸಿಂಗ್ ಅವರನ್ನು ರಕ್ಷಿಸಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಶುಕ್ರವಾರ ಘಟನೆ ನಡೆದಿದ್ದು, ಆರೋಪಿಗಳು ಆಟಿಕೆ ಗನ್ ಹಿಡಿದು ನ್ಯೂ ಟೌನ್‌ನಲ್ಲಿರುವ ಸಿಂಗ್ ಮನೆಗೆ ನುಗ್ಗಿ ಸಿಂಗ್ ಮತ್ತು ಅವರ ಸಹಚರರೊಬ್ಬರನ್ನು ಅಪಹರಿಸಿದ್ದಾರೆ. ಬಳಿಕ ಸಿಂಗ್ ಪತ್ನಿಗೆ ಕರೆ ಮಾಡಿ ₹ 15 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ.

ADVERTISEMENT

ಸಿಂಗ್ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕೂಡಲೇ ಕ್ರಮ ಕೈಗೊಂಡು ಶುಕ್ರವಾರ ಸಂಜೆ ಇಬ್ಬರನ್ನು ರಕ್ಷಿಸಿದ್ದಾರೆ ಮತ್ತು ಬೆನೈಪುಕುರ್‌ನಲ್ಲಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಬಂಧಿತ ಆರೋಪಿಗಳಲ್ಲಿ ಇಬ್ಬರು ಮಣಿಪುರದವರು, ಇಬ್ಬರು ಕೋಲ್ಕತ್ತ ಮತ್ತು ಒಬ್ಬರು ಪಂಜಾಬ್‌ನವರು. ಆರೋಪಿಗಳಿಂದ ₹ 2 ಲಕ್ಷ ಹಣ, ಎರಡು ವಾಹನಗಳು ಮತ್ತು ಮೂರು ಆಟಿಕೆ ಗನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ವ್ಯಕ್ತಿಯೊಬ್ಬ ರೂಪಿಸಿದ್ದ ಯೋಜನೆಯ ಅನುಸಾರ ಹಣಕ್ಕಾಗಿ ಆರೋಪಿಗಳು ಅಪಹರಣ ಮಾಡಿದ್ದಾರೆ. ಐವರನ್ನು ವಿಚಾರಣೆಗೊಳಪಡಿಸಿದ್ದು, ಕೋಲ್ಕತ್ತದ ಇಬ್ಬರು ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.