
ಸೈಕ್ಲಿಂಗ್
(ಸಾಂದರ್ಭಿಕ ಚಿತ್ರ)
ಇಂಫಾಲ್ : ಮಣಿಪುರದಲ್ಲಿ ಶಾಂತಿ ನೆಲಸಲಿ ಎನ್ನುವ ಆಶಯದೊಂದಿಗೆ 2,300 ಕಿ.ಮೀ ದೂರದಿಂದ ಸೈಕ್ಲಿಂಗ್ ಮಾಡುತ್ತಾ ಬಂದಿರುವ ಮೈತೇಯಿ ಸಮುದಾಯಕ್ಕೆ ಸೇರಿದ ಲಿಂಗತ್ವ ಅಲ್ಪಸಂಖ್ಯಾತರಾದ ಸೈಕ್ಲಿಸ್ಟ್ ಮೆಲೀಮ್ ತೊನ್ಗಂ ಅವರು ಕುಕಿ ಬುಡಕಟ್ಟು ಸಮುದಾಯದ ಜನರು ಹೆಚ್ಚಿರುವ ಕಾಂಗ್ಪೋಕ್ಪಿ ಜಿಲ್ಲೆ ಪ್ರವೇಶಿಸುವ ವಿಚಾರದಲ್ಲಿ ವಿವಿಧ ಕುಕಿ ಸಂಘಟನೆಗಳು ಎಚ್ಚರಿಕೆ ನೀಡಿವೆ.
‘ಮಣಿಪುರ ಶಾಂತಿಗಾಗಿ ಸೈಕ್ಲಿಂಗ್’ ಹೆಸರಿನಲ್ಲಿ ಮೆಲೀಮ್ ಅವರು ಇದೇ ಅ.2ರಿಂದ ದೆಹಲಿಯ ಕುತುಬ್ ಮಿನಾರ್ನಿಂದ ಸೈಕ್ಲಿಂಗ್ ಆರಂಭಿಸಿದ್ದರು. ಬುಧವಾರ ಅವರು ನಾಗಾ ಸಮುದಾಯದ ಜನರು ಹೆಚ್ಚಿರುವ ಜಿಲ್ಲೆಯೊಂದನ್ನು ತಲುಪಿದರು. ಇಲ್ಲಿಂದ ಇಂಫಾಲ್ ತಲುಪಲು ಕಾಂಗ್ಪೋಕ್ಪಿ ಜಿಲ್ಲೆಯನ್ನು ಹಾದು ಹೋಗಬೇಕಿದೆ. ಇಲ್ಲಿಗೆ ಅವರು ಶುಕ್ರವಾರ ತಲುಪಲಿದ್ದಾರೆ.
ಕಮ್ಯೂನಿಟಿ ಆನ್ ಟ್ರೈಬಲ್ ಯುನಿಟಿ (ಸಿಒಟಿಯು) ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದೆ. ‘ಮಣಿಪುರದಲ್ಲಿ ಶಾಂತಿ ನೆಲಸಬೇಕು ಎಂದುಕೊಂಡು ಮೆಲೀಮ್ ಅವರು ಸಂಘರ್ಷ ಪ್ರಚೋದಿಸಲು ಕಾಂಗ್ಪೋಕ್ಪಿ ಜಿಲ್ಲೆಯನ್ನು ಹಾದು ಹೋಗಲು ಬಯಸುತ್ತಿದ್ದಾರೆ. ಇದನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲವಾದಲ್ಲಿ ಏನಾದರೂ ಅಹಿತಕರ ಘಟನೆ ನಡೆದರೆ, ಅದಕ್ಕೆ ಆಡಳಿತವೇ ನೇರ ಹೊಣೆಯಾಗಿರಲಿದೆ’ ಎಂದು ಎಚ್ಚರಿಕೆ ನೀಡಿದೆ.
‘ಮೆಲೀಮ್ ಅವರು ಸೈಕ್ಲಿಂಗ್ ಕೈಗೊಳ್ಳಲಿರುವ ಕಾಂಗ್ಪೋಕ್ಪಿ ಜಿಲ್ಲೆಯನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ–2ರ ಉದ್ದಕ್ಕೂ ಹೆಚ್ಚಿನ ಭದ್ರತೆ ಒದಗಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.