ADVERTISEMENT

ನಕಲಿ ದಾಖಲೆಗಳಿಗೆ ಸಹಿ ಹಾಕುವಂತೆ ಸಿಸೋಡಿಯಾ ಅವರಿಗೆ ಸಿಬಿಐನಿಂದ ಕಿರುಕುಳ: ಎಎಪಿ

ಪಿಟಿಐ
Published 5 ಮಾರ್ಚ್ 2023, 14:34 IST
Last Updated 5 ಮಾರ್ಚ್ 2023, 14:34 IST
ಮನೀಶ್‌ ಸಿಸೋಡಿಯಾ
ಮನೀಶ್‌ ಸಿಸೋಡಿಯಾ   

ನವದೆಹಲಿ: ಸುಳ್ಳು ಆರೋಪಗಳನ್ನೊಳಗೊಂಡ ಪತ್ರಗಳಿಗೆ ಸಹಿ ಹಾಕುವಂತೆ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರಿಗೆ ಸಿಬಿಐ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ವಕ್ತಾರ ಸೌರಭ್‌ ಭಾರದ್ವಾಜ್‌ ಅವರು ಆರೋಪಿಸಿದ್ದಾರೆ.

ದೆಹಲಿ ಅಬಕಾರಿ ನೀತಿ ಪ್ರಕರಣದ ತನಿಖೆಗೆ ಸೂಕ್ತ ರೀತಿಯಲ್ಲಿ ಸಹಕರಿಸುತ್ತಿಲ್ಲ ಹಾಗೂ ತನಿಖಾಧಿಕಾರಿಗಳ ಪ್ರಶ್ನೆಗಳಿಗೆ ಬೇಜವಾಬ್ದಾರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು ಫೆಬ್ರುವರಿ 26ರಂದು ಬಂಧಿಸಿದ್ದರು. ಸಿಬಿಐ ವಿಶೇಷ ನ್ಯಾಯಾಲಯವು ಸಿಸೋಡಿಯಾ ಅವರ ಕಸ್ಟಡಿ ಅವಧಿಯನ್ನು ಶನಿವಾರ ಮಾರ್ಚ್‌ 6ರ ವರೆಗೆ ವಿಸ್ತರಿಸಿದೆ.

ಸಿಸೋಡಿಯಾ ಅವರು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಸಂಪುಟ ಸ್ಥಾನಗಳಿಗೆ ಫೆಬ್ರುವರಿ 28ರಂದು ರಾಜೀನಾಮೆ ನೀಡಿದ್ದರು.

ADVERTISEMENT

ದೆಹಲಿ ಸರ್ಕಾರ ಜಾರಿಗೊಳಿಸಿದ್ದ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಜ್ಞರ ಸಮಿತಿ ಶಿಫಾರಸು ಮೇಲಿನ ಕಾನೂನು ಅಭಿಪ್ರಾಯಗಳನ್ನೊಳಗೊಂಡ ಪ್ರಮುಖ ಕಡತ ಈವರೆಗೆ ಪತ್ತೆಯಾಗಿಲ್ಲ. ಸದ್ಯ ಸಿಸೋಡಿಯಾ ಅವರ ಕಸ್ಟಡಿ ಅವರ ವಿಸ್ತರಣೆಯಾಗಿರುವುದನ್ನು ಬಳಸಿಕೊಂಡು ಕಡತ ಪತ್ತೆ ಹಚ್ಚಲು ಸಿಬಿಐ ಬಯಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಬಂಧ ಮಾಧ್ಯಮದವರೊಂದಿಗೆ ಭಾನುವಾರ ಮಾತನಾಡಿರುವ ಸೌರಭ್‌ ಭಾರದ್ವಾಜ್‌, 'ಮನೀಶ್‌ ಸಿಸೋಡಿಯಾ ಅವರಿಗೆ ಸಿಬಿಐ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದು, ಅವರ ವಿರುದ್ಧ ಮಾಡಲಾಗಿರುವ ಸುಳ್ಳು ಆರೋಪಗಳನ್ನು ಒಳಗೊಂಡ ದಾಖಲೆಗಳಿಗೆ ಸಹಿ ಹಾಕುವಂತೆ ಒತ್ತಡ ಹೇರಲಾಗುತ್ತಿದೆ. ಸಿಸೋಡಿಯಾ ವಿರುದ್ಧದ ಯಾವುದೇ ದಾಖಲೆಗಳು ಸಿಬಿಐ ಬಳಿ ಇಲ್ಲ. ಅವರ ವಿರುದ್ಧದ ಯಾವುದೇ ಸಾಕ್ಷ್ಯ ಕಳೆದುಹೋಗಿರುವ ಬಗ್ಗೆಯೂ ಉಲ್ಲೇಖ ಮಾಡಿಲ್ಲ. ಸಿಸೋಡಿಯಾ ಮನೆ ಮೇಲೆ ದಾಳಿ ಮಾಡಿದ್ದಾಗಲೂ ಯಾವ ದಾಖಲೆಯೂ ಸಿಕ್ಕಿಲ್ಲ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.