ನವದೆಹಲಿ: ದೇಶದಲ್ಲಿ ಕೋವಿಡ್ ಸಾಂಕ್ರಾಮಿಕವು ಇನ್ನೂ ಕೊನೆಗೊಂಡಿಲ್ಲ ಎಂದು ಪ್ರಧಾನಿ ಮೋದಿ ಎಚ್ಚರಿಕೆ ನೀಡಿದರು.
ತಮ್ಮ ಮಾಸಿಕ ‘ಮನ್ ಕಿ ಬಾತ್’ನಲ್ಲಿ ಭಾನುವಾರ ಮಾತನಾಡಿದ ಅವರು, 'ಕೋವಿಡ್ ಸಾಂಕ್ರಾಮಿಕವು ಇನ್ನೂ ಕೊನೆಗೊಂಡಿಲ್ಲ. ಕೊರೊನಾ ಸೋಂಕಿನ ವಿರುದ್ಧ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ‘ ಎಂದು ತಿಳಿಸಿದರು.
ಇದೇ ವೇಳೆ ಅಂಬೇಡ್ಕರ್ ಅವರನ್ನು ಸ್ಮರಿಸಿರುವ ಅವರು, ‘ಡಿಸೆಂಬರ್ ತಿಂಗಳಲ್ಲಿ ನಮಗೆ ಮತ್ತೊಂದು ಪ್ರಮುಖ ದಿನ ಬರಲಿದೆ. ಇದರಿಂದ ನಾವು ಸ್ಫೂರ್ತಿ ಪಡೆಯಬಹುದು. ಡಿಸೆಂಬರ್ 6 ರಂದು ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುಣ್ಯತಿಥಿ. ಬಾಬಾ ಸಾಹೇಬರು ದೇಶ ಮತ್ತು ಸಮಾಜಕ್ಕಾಗಿ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದರು. ನಾವು ಕರ್ತವ್ಯಗಳನ್ನು ನಿರ್ವಹಿಸಬೇಕಿದೆ. ಇದನ್ನು ನಮ್ಮ ಸಂವಿಧಾನವು ನಿರೀಕ್ಷಿಸುತ್ತದೆ ಎಂಬುದನ್ನು ನಾವು ಮರೆಯಬಾರದು‘ ಎಂದು ಮೋದಿ ಹೇಳಿದರು.
‘ಮುಂದಿನ 2 ದಿನಗಳಲ್ಲಿ 2021ರ ಕೊನೆಯ ತಿಂಗಳಿಗೆ ಕಾಲಿಡುತ್ತೇವೆ. ಈ ತಿಂಗಳಲ್ಲಿ ನಾವು ನೌಕಾಪಡೆಯ ದಿನ ಮತ್ತು ರಾಷ್ಟ್ರೀಯ ಧ್ವಜ ದಿನವನ್ನು ಆಚರಿಸಲಿದ್ದೇವೆ. ರಕ್ಷಣಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವೀರ ಪುತ್ರರು ಮತ್ತು ತಾಯಂದಿರಿಗೆ ನಾನು ನಮನ ಸಲ್ಲಿಸಲು ಬಯಸುತ್ತೇನೆ‘ ಎಂದೂ ಪ್ರಧಾನಿ ತಿಳಿಸಿದರು.
ಭಾರತೀಯ ಸ್ಟಾರ್ಟ್ಅಪ್ಗಳಿಂದ ಜಾಗತಿಕ ಸಮಸ್ಯೆಗಳಿಗೆ ಪರಿಹಾರ
‘ಭಾರತದಲ್ಲಿ 70 ಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳು ಒಂದುಬಿಲಿಯನ್ಗಿಂತಲೂ ಹೆಚ್ಚು ಮೌಲ್ಯವನ್ನು ದಾಟಿವೆ. ಅನೇಕ ಭಾರತೀಯರು ತಮ್ಮ ಸ್ಟಾರ್ಟ್ಅಪ್ಗಳ ಮೂಲಕ ಜಾಗತಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುತ್ತಿದ್ದಾರೆ‘ ಎಂದು ಮೋದಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.