ADVERTISEMENT

ಪರ್ರೀಕರ್‌ ಆರೋಗ್ಯದ ಕಡೆ ಗಮನ ನೀಡಲಿ: ಒಮರ್‌ ಅಬ್ದುಲ್ಲಾ

ಮುಖ್ಯಮಂತ್ರಿಗೆ ಯಾವುದೇ ಒತ್ತಡ, ತಮಾಷೆ ಬೇಡ ಎಂದ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ

ಪಿಟಿಐ
Published 17 ಡಿಸೆಂಬರ್ 2018, 10:51 IST
Last Updated 17 ಡಿಸೆಂಬರ್ 2018, 10:51 IST
ಮಾಂಡೋವಿ ನದಿಗೆ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿಯನ್ನು ಪರಿಶೀಲಿಸುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರೀಕರ್‌. ಅವರ ಮೂಗಿಗೆ ಟ್ಯೂಬ್‌ ಅಳವಡಿಸಲಾಗಿದೆ – ಪಿಟಿಐ ಚಿತ್ರ
ಮಾಂಡೋವಿ ನದಿಗೆ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿಯನ್ನು ಪರಿಶೀಲಿಸುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರೀಕರ್‌. ಅವರ ಮೂಗಿಗೆ ಟ್ಯೂಬ್‌ ಅಳವಡಿಸಲಾಗಿದೆ – ಪಿಟಿಐ ಚಿತ್ರ   

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರೀಕರ್‌ ಅವರು ಯಾವುದೇ ಒತ್ತಡವಿಲ್ಲದೆ ಮತ್ತು ನಗೆಪಾಟಲಿಗೆ ಈಡಾಗದಂತೆ ತಮ್ಮ ಆರೋಗ್ಯದ ಕಡೆ ಗಮನ ಹರಿಸಲು ಬಿಡಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ ಸೋಮವಾರ ಹೇಳಿದ್ದಾರೆ.

ಪಣಜಿಯಲ್ಲಿ ಮಾಂಡೋವಿ ನದಿಗೆ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿಯನ್ನು ಪರ್ರೀಕರ್‌ ಅವರು ಭಾನುವಾರ ಪರಿಶೀಲಿಸುತ್ತಿರುವ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು. ಮೇದೋಜಿಕರ ಗ್ರಂಥಿ ಕ್ಯಾನ್ಸರ್‌ಗೆ ತುತ್ತಾಗಿರುವ ಪರ್ರೀಕರ್‌ ಎರಡು ತಿಂಗಳ ನಂತರ ಇದೇ ಮೊದಲ ಬಾರಿಗೆ ತಮ್ಮ ಖಾಸಗಿ ನಿವಾಸದಿಂದ ಹೊರಬಂದಿದ್ದರು. ಅವರ ಮೂಗಿಗೆ ಟ್ಯೂಬ್‌ ಅಳವಡಿಸಲಾಗಿದೆ. ಅನಾರೋಗ್ಯದ ನಡುವೆಯೂ ಗೋವಾ ರಾಜ್ಯ ಮೂಲಸೌಲಭ್ಯ ಅಭಿವೃದ್ಧಿ ನಿಗಮ ಮತ್ತು ಗುತ್ತಿಗೆ ಪಡೆದಿದ್ದ ಲಾರ್ಸನ್‌ ಅಂಡ್‌ ಟೂಬ್ರೊ ಕಂಪನಿಯ ಎಂಜಿನಿಯರ್‌ಗಳಿಗೆ ಪರ್ರೀಕರ್‌ ಸೂಚನೆಗಳನ್ನು ನೀಡುತ್ತಿರುವ ಚಿತ್ರಗಳು ಪ್ರಕಟವಾಗಿದ್ದವು.

‘ಪರ್ರೀಕರ್‌ ಅವರು ಕೆಲಸ ಮಾಡುವಂತೆ ಒತ್ತಾಯಿಸುವುದು ಮತ್ತು ಛಾಯಾಚಿತ್ರಗಳನ್ನು ತೆಗೆಯುವುದು ಅಮಾನವೀಯ’ ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ADVERTISEMENT

ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪರ್ರೀಕರ್‌ ಅವರು ಅಕ್ಟೋಬರ್‌ 14 ರಂದು ರಾಜ್ಯಕ್ಕೆ ಮರಳಿದ್ದರು. ಖಾಸಗಿ ನಿವಾಸದಲ್ಲೇ ಚೇತರಿಸಿಕೊಳ್ಳುತ್ತಿರುವ ಅವರು ಇದೇ ಮೊದಲ ಬಾರಿಗೆ ಭಾನುವಾರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.

ಮಾಂಡೋವಿ ನದಿ ಸೇತುವೆ ಕಾಮಗಾರಿ ಅಲ್ಲದೆ ಅಗಾಸಿಯಾಂ ಗ್ರಾಮದಲ್ಲಿ ಜೌರಿ ನದಿಗೆ ನಿರ್ಮಿಸುತ್ತಿದ್ದ ಸೇತುವೆ ಕಾಮಗಾರಿಯನ್ನೂ ಪರಿಶೀಲನೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.