ADVERTISEMENT

ಉತ್ತರ ಪ್ರದೇಶ ರೈಲ್ವೆ ಗೇಟ್‌ನಲ್ಲಿ ಅಪಘಾತ: ಐವರ ಸಾವು

ಕಾವಲುಗಾರರು ಇರುವ ಲೆವೆಲ್‌ ಕ್ರಾಸಿಂಗ್‌ನಲ್ಲೇ ಘಟನೆ

ಪಿಟಿಐ
Published 22 ಏಪ್ರಿಲ್ 2021, 5:37 IST
Last Updated 22 ಏಪ್ರಿಲ್ 2021, 5:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶಹಜಹಾನ್‌ಪುರ, ಉತ್ತರಪ್ರದೇಶ: ಗೇಟುಗಳು ತೆರೆದೇ ಇದ್ದ ಮಾನವಸಹಿತ ಲೆವೆಲ್‌ಕ್ರಾಸಿಂಗ್ ಒಂದರಲ್ಲಿ ರೈಲೊಂದು ಹಲವು ವಾಹನಗಳಿಗೆ ಡಿಕ್ಕಿ ಹೊಡೆದುದರಿಂದ ಕನಿಷ್ಠ ಐವರು ಮೃತಪಟ್ಟ ಘಟನೆ ಮೀರನ್‌ಪುರ ಕಟ್ರಾ ರೈಲು ನಿಲ್ದಾಣದ ಸಮೀಪ ಗುರುವಾರ ಬೆಳಿಗ್ಗೆ ಸಂಭವಿಸಿದೆ.

‘ಲಖನೌ-ಚಂಡೀಗಢ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲು ಎರಡು ಟ್ರಕ್‌ಗಳು, ಒಂದು ಕಾರು ಮತ್ತು ಬೈಕೊಂದಕ್ಕೆ ಡಿಕ್ಕಿ ಹೊಡೆಯಿತು. ಬಳಿಕ ಅದರ ಎಂಜಿನ್‌ ಹಳಿತಪ್ಪಿತು. ಇದರಿಂದ ರೈಲು ಮಾರ್ಗದ ಎರಡೂ ದಿಕ್ಕುಗಳಲ್ಲಿ ರೈಲುಗಳ ಸಂಚಾರಕ್ಕೆ ಅಡ್ಡಿ ಉಂಟಾಗಿದೆ’ ಎಂದು ಗ್ರಾಮಾಂತರ ವಿಭಾಗದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್‌ ಬಾಜಪೇಯಿ ತಿಳಿಸಿದರು.

‘ಮೃತರಲ್ಲಿ ಮೂವರು ಒಂದೇ ಕುಟುಂಬಕ್ಕೆ ಸೇರಿದವರು. ಒಬ್ಬರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಹಾರ ಕಾರ್ಯ ಮುಂದುವರಿದಿದೆ. ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ’ ಎಂದು ಬಾಜಪೇಯಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ADVERTISEMENT

‘ಇದೊಂದು ಕಾವಲಗಾರರು ಇರುವ ಲೆವೆಲ್‌ ಕ್ರಾಸಿಂಗ್‌. ರೈಲುಗಳು ಬರುತ್ತಿದ್ದ ವೇಳೆಯೂ ಗೇಟ್‌ಗಳನ್ನು ಏಕೆ ಮುಚ್ಚಿರಲಿಲ್ಲ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತರ ಕುಟುಂಬಗಳಿಗೆ ತಲಾ ₹ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.