ADVERTISEMENT

ಛತ್ತೀಸಗಢದಲ್ಲಿ ಎರಡು ಪ್ರತ್ಯೇಕ ಎನ್‌ಕೌಂಟರ್‌: 30 ನಕ್ಸಲರ ಹತ್ಯೆ

ಪಿಟಿಐ
Published 20 ಮಾರ್ಚ್ 2025, 9:17 IST
Last Updated 20 ಮಾರ್ಚ್ 2025, 9:17 IST
<div class="paragraphs"><p>ಭದ್ರತಾ ಪಡೆಗಳ ಕಾರ್ಯಾಚರಣೆ</p></div>

ಭದ್ರತಾ ಪಡೆಗಳ ಕಾರ್ಯಾಚರಣೆ

   

–ಪಿಟಿಐ ಚಿತ್ರ

ಬಿಜಾಪುರ: ಛತ್ತೀಸಗಢದ ಬಿಜಾ‍ಪುರ ಹಾಗೂ ಕಾಂಕೇರ್‌ ಜಿಲ್ಲೆಗಳಲ್ಲಿ ನಕ್ಸಲರ ವಿರುದ್ಧ ಬಿಎಸ್‌ಎಫ್‌ ಹಾಗೂ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಗುರುವಾರ ಜಂಟಿ ಕಾರ್ಯಾಚರಣೆ ನಡೆಸಿದ್ದು, ಎನ್‌ಕೌಂಟರ್‌ನಲ್ಲಿ ಒಟ್ಟು 30 ನಕ್ಸಲರು ಮೃತಪಟ್ಟಿದ್ದಾರೆ.

ADVERTISEMENT

ಬಿಜಾಪುರದಲ್ಲಿ 26 ಹಾಗೂ ಕಾಂಕೇರ್‌ನಲ್ಲಿ ನಾಲ್ವರು ನಕ್ಸರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ.

‘ದಾಂತೇವಾಡ–ಬಿಜಾಪುರ ಜಿಲ್ಲಾ ಗಡಿ ಹಾಗೂ ಕಾಂಕೇರ್‌–ನಾರಾಯಣಪುರ ಜಿಲ್ಲೆಗಳ ಗಡಿಗಳ ಅರಣ್ಯ ಪ್ರದೇಶಗಳಲ್ಲಿ ಬಿಎಸ್‌ಎಫ್‌ ಹಾಗೂ ಡಿಆರ್‌ಜಿ ಪಡೆಗಳು ಮುಂಜಾನೆಯಿಂದಲೇ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದವು. ಬೆಳಿಗ್ಗೆ 7 ಗಂಟೆ ಸುಮಾರಿಗೆ ನಕ್ಸಲರು ಹಾಗೂ ಈ ಪಡೆಗಳ ಮಧ್ಯೆ ಗುಂಡಿನ ಚಕಮಕಿ ಏರ್ಪಟಿತ್ತು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ಬಿಜಾಪುರದಲ್ಲಿ ಎನ್‌ಕೌಂಟರ್‌ ನಡೆದ ಸ್ಥಳದಿಂದ ನಕ್ಸಲರ ಬಂದೂಕುಗಳು ಹಾಗೂ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ. ಕಾಂಕೇರ್‌ನಲ್ಲಿ ಸ್ವಯಂ ಚಾಲಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಜಾಗಗಳಲ್ಲಿ ಪಡೆಗಳು ಇನ್ನಷ್ಟು ಶೋಧಕಾರ್ಯ ನಡೆಸುತ್ತಿವೆ’ ಎಂದು ವಿವರಿಸಿದರು. 2025ರ ಆರಂಭದಿಂದ ಇಲ್ಲಿಯವರೆಗೆ ಬಿಜಾಪುರ ಹಾಗೂ ಕಾಂಕೇರ್‌ ಜಿಲ್ಲೆಗಳನ್ನು ಸೇರಿ ಬಸ್ತಾರ್‌ ವಿಭಾಗದಲ್ಲಿ 100ಕ್ಕೂ ಹೆಚ್ಚು ನಕ್ಸಲರನ್ನು ಹತ್ಯೆ ಮಾಡಲಾಗಿದೆ.

‘ಮೋದಿ ಸರ್ಕಾರದಿಂದ ಕಠಿಣ ನೀತಿ’
ದೇಶವನ್ನು ನಕ್ಸಲ್‌ ಮುಕ್ತ ಮಾಡಬೇಕು ಎಂಬ ಅಭಿಯಾನದಲ್ಲಿ ಭದ್ರತಾ ಪಡೆಗಳು ಛತ್ತೀಸಗಢದಲ್ಲಿ 22 ನಕ್ಸಲರನ್ನು ಹತ್ಯೆ ಮಾಡುವ ಮೂಲಕ ದೊಡ್ಡ ಯಶ ಗಳಿಸಿವೆ. ಮೋದಿ ಸರ್ಕಾರವು ನಕ್ಸಲರ ವಿರುದ್ಧ ಕಠಿಣ ನೀತಿ ರೂಪಿಸಿದೆ. ಭದ್ರತಾ ಪಡೆಗಳ ಮುಂದೆ ಶರಣಾಗತಿ ಹೊಂದಿ, ಸಮಾಜದ ಮುಖ್ಯ ವಾಹಿನಿಗೆ ಬರುವ ನಕ್ಸಲರಿಗೆ ಹಲವು ಸೌಲಭ್ಯ ಗಳನ್ನು ನೀಡಲಾಗಿದೆ. ಆದರೂ ನಕ್ಸಲರು ಶರಣಾಗುತ್ತಿಲ್ಲ. 2026ರ ಮಾರ್ಚ್‌ 31ಕ್ಕೆ ದೇಶವು ನಕ್ಸಲ್‌ ಮುಕ್ತ ದೇಶವಾಗಲಿದೆ ಎಂದು ಗೃಹ ಸಚಿವ ಅಮಿತ್‌ ಶಾ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.