ಲಖನೌ:‘ಗುಮ್ನಾಮಿ ಬಾಬಾ ಮತ್ತು ಸುಭಾಷ್ಚಂದ್ರ ಬೋಸ್ ಅವರ ಮಧ್ಯೆ ಸಾಮ್ಯಗಳಿದ್ದವು. ಆದರೆ ಗುಮ್ನಾಮಿ ಬಾಬಾ ಅವರೇ ಸುಭಾಷ್ಚಂದ್ರ ಬೋಸ್ ಅಲ್ಲ’ ಎಂದು ನಿವೃತ್ತ ನ್ಯಾಯಮೂರ್ತಿ ವಿಷ್ಣು ಸಹಾಯ್ ಆಯೋಗವು ಸ್ಪಷ್ಟಪಡಿಸಿದೆ.
ಉತ್ತರ ಪ್ರದೇಶದ ಫರೀದಾಬಾದ್ನಲ್ಲಿ ವಾಸಿಸಿದ್ದ ಗುಮ್ನಾಮಿ ಬಾಬಾ ಅವರು ಸ್ವಾತಂತ್ರ್ಯ ಹೋರಾಟಗಾರ ಬೋಸ್ ಅವರನ್ನೇ ಹೋಲುತ್ತಿದ್ದರು.
1985ರಲ್ಲಿ ಇವರು ಸಾವನ್ನಪ್ಪಿದ್ದರು. ಆದರೆ, ಸ್ವಾತಂತ್ರ್ಯಾನಂತರ ಅಜ್ಞಾತರಾಗಿ ಉಳಿಯಲು ಬಯಸಿದ್ದ ಸುಭಾಷ್ಚಂದ್ರ ಬೋಸ್ ಅವರೇ ಗುಮ್ನಾಮಿ ಬಾಬಾ ಹೆಸರಿನಲ್ಲಿ ಫರೀದಾಬಾದ್ನಲ್ಲಿ ನೆಲೆಸಿದ್ದರು ಎಂಬ ವದಂತಿಗಳು ಆ ನಂತರ ಹಬ್ಬಿದ್ದವು.
ಬೋಸ್ ಅವರು ಧರಿಸುತ್ತಿದ್ದಂಥದ್ದೇ ಕನ್ನಡಕವನ್ನು ಬಾಬಾ ಸಹ ಧರಿಸುತ್ತಿದ್ದರು. ಬಾಬಾ ಅವರಲ್ಲಿದ್ದ ಪೆಟ್ಟಿಗೆಯಿಂದ ಬೋಸ್ ಕುಟುಂಬದ ಕೆಲವರ ಭಾವಚಿತ್ರಗಳು ಸಹ ಲಭಿಸಿದ್ದವು.
ಈ ಬಗ್ಗೆ ತನಿಖೆ ನಡೆಸಲು ಆಯೋಗ ರಚಿಸುವಂತೆ ನ್ಯಾಯಾಲಯವು 2016ರಲ್ಲಿ ಅಂದಿನ ಅಖಿಲೇಶ್ ಯಾದವ್ ನೇತೃತ್ವದ ಸರ್ಕಾರಕ್ಕೆ ಸೂಚನೆ ನೀಡಿತ್ತು. ಅದರಂತೆ ನಿವೃತ್ತ ನ್ಯಾಯಮೂರ್ತಿ ಸಹಾಯ್ ನೇತೃತ್ವದ ಆಯೋಗ ರಚಿಸಲಾಗಿತ್ತು. ಆಯೋಗವು 2017ರ ಸೆಪ್ಟೆಂಬರ್ ತಿಂಗಳಲ್ಲಿ ವರದಿ ಸಲ್ಲಿಸಿತ್ತು. ಅದನ್ನು ಇತ್ತೀಚೆಗೆ ಉತ್ತರ ಪ್ರದೇಶದ ವಿಧಾನಸಭೆಯಲ್ಲಿ ಮಂಡಿಸಲಾಗಿದೆ.
‘ಬಾಬಾ ಅವರು ಸುಭಾಷ್ಚಂದ್ರ ಬೋಸ್ ಅವರ ಅನುಯಾಯಿಯಾಗಿದ್ದರು. ಪಶ್ಚಿಮ ಬಂಗಾಳದವರಾಗಿದ್ದ ಅವರು ಹಿಂದಿ, ಇಂಗ್ಲಿಷ್ ಹಾಗೂ ಬಂಗಾಳಿ ಭಾಷೆಗಳಲ್ಲಿ ವ್ಯವಹರಿಸಬಲ್ಲವರಾಗಿದ್ದರು. ಈ ಭಾಷೆಗಳ ಅನೇಕ ಪುಸ್ತಕಗಳು ಅವರ ಮನೆಯಿಂದ ಲಭಿಸಿವೆ. ಬಾಬಾ ಏಕಾಂತ ಜೀವನ ನಡೆಸಿದ್ದರು ಎಂಬುದು ನಿಜ. ಬೋಸ್ ಅವರಂತೆ ಧ್ವನಿಯೂ ಅತ್ಯಂತ ಪರಿಣಾಮಕಾರಿಯಾಗಿತ್ತು. ಆದರೆ, ಬೋಸ್ ಅವರೇ ಗುಮ್ನಾಮಿ ಬಾಬಾ ಹೆಸರಿನಲ್ಲಿ ಜೀವಿಸಿರಲಿಲ್ಲ’ ಎಂದು ವರದಿ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.