ಬಲಿಯಾ, ಉತ್ತರ ಪ್ರದೇಶ: ‘ಸಮಾಜವಾದಿ ಪಕ್ಷದ (ಎಸ್ಪಿ) ಜತೆಗೆ ಮೈತ್ರಿ ಮಾಡಿಕೊಳ್ಳುವಮೂಲಕ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಅಧ್ಯಕ್ಷೆ ಮಾಯಾವತಿ ಮಹಿಳೆಯರ ಘನತೆಯನ್ನು ಕೊಲೆ ಮಾಡಿದ್ದಾರೆ’ ಎಂದು ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಆರೋಪಿಸಿದ್ದಾರೆ.
ಲಖನೌದ ಸರ್ಕಾರಿ ಅತಿಥಿಗೃಹದಲ್ಲಿ 1995ರಲ್ಲಿ ಎಸ್ಪಿ ಕಾರ್ಯಕರ್ತರು ಮಾಯಾವತಿ ಮೇಲೆ ನಡೆಸಿದ ದಾಳಿಯನ್ನು ಪ್ರಸ್ತಾಪಿಸಿರುವ ಸಿಂಗ್, ‘ಅಧಿಕಾರಕ್ಕಾಗಿ ಅವರು ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ. ತಮ್ಮ ಮೇಲೆ ದಾಳಿ ನಡೆಸಿದ, ಒಂದು ಕಾಲದ ಬದ್ಧ ವೈರಿಗಳಾಗಿದ್ದ ಸಮಾಜವಾದಿ ಪಕ್ಷವನ್ನು ಅಪ್ಪಿಕೊಂಡಿದ್ದಾರೆ. ಮೌಲ್ಯಗಳು ಹಾಗೂ ಘನತೆಯನ್ನು ಗಾಳಿಗೆ ತೂರಿದ್ದಾರೆ’ ಎಂದು ಆಪಾದಿಸಿದ್ದಾರೆ.
‘ಒಬ್ಬರು ಯಶಸ್ಸು ಸಾಧಿಸಬಹುದು, ಇಲ್ಲದಿರಬಹುದು. ಆದರೆ, ತಮ್ಮ ಘನತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದವರ ಜತೆಗೆ ಸೇರಿಕೊಳ್ಳಬೇಕು. ಎಸ್ಪಿ ಜತೆಗೆ ಕೈಜೋಡಿಸುವ ಮೂಲಕ ಮಾಯಾವತಿ ಅವರಿಗೆ ಸ್ವಾಭಿಮಾನವಿಲ್ಲ ಎಂಬುದು ಸಾಬೀತಾಗಿದೆ. ಅವರ ವಿರುದ್ಧ ಅಶ್ಲೀಲ ಭಾಷೆ ಬಳಸಿ ಘನತೆಗೆ ಧಕ್ಕೆ ತಂದರೂ ಮಾಯಾವತಿಗೆ ಬೇಸರವಿಲ್ಲ. ಅವರಿಗೆ ಸ್ಥಾನ ಮತ್ತು ಸ್ವಹಿತಾಸಕ್ತಿಯೇ ಮುಖ್ಯ’ ಎಂದು ಸಿಂಗ್ ಟೀಕಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ವಿರುದ್ಧ ವಾಗ್ದಾಳಿ ನಡೆಸಿದ ಮರುದಿನ ಮಾಯಾವತಿ ವಿರುದ್ಧ ಸೀಂಗ್ ಟೀಕಾ ಪ್ರಹಾರ ಮಾಡಿದ್ದಾರೆ.
ರಾಮಾಯಣದ ರಾವಣನಿಗೆ ರಾಹುಲ್ ಅವರನ್ನು ಹಾಗೂ ಶೂರ್ಪನಖಿಗೆ ಪ್ರಿಯಾಂಕಾ ಅವರನ್ನು ಹೋಲಿಸಿದ್ದ ಸಿಂಗ್, ಕಾಂಗ್ರೆಸ್ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದರು. ಮಾಯಾವತಿ ಅವರನ್ನು ಟೀಕಿಸಿದ್ದ ಬಿಜೆಪಿಯ ಮತ್ತೊಬ್ಬ ಶಾಸಕಿ ಸಾಧನಾ ಸಿಂಗ್ ಅವರಿಗೂ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.