ADVERTISEMENT

ಹಮಾಸ್‌ ಪ್ರಶ್ನೆ: ಸಂಸತ್‌ನಲ್ಲಿ ಉತ್ತರಿಸಿದ ಸಚಿವರ ಹೆಸರು ಸರಿಪಡಿಸಿದ ಸರ್ಕಾರ 

ಪಿಟಿಐ
Published 11 ಡಿಸೆಂಬರ್ 2023, 14:07 IST
Last Updated 11 ಡಿಸೆಂಬರ್ 2023, 14:07 IST
ವಿದೇಶಾಂಗ ಖಾತೆ ರಾಜ್ಯ ಸಚಿವ ಮುರಳೀಧರನ್
ವಿದೇಶಾಂಗ ಖಾತೆ ರಾಜ್ಯ ಸಚಿವ ಮುರಳೀಧರನ್   

ನವದೆಹಲಿ: ಪ್ಯಾಲೆಸ್ಟೀನ್‌ನ ಬಂಡುಕೋರ ಸಂಘಟನೆ ‘ಹಮಾಸ್‌’ಗೆ ಸಂಬಂಧಿಸಿ ಸಂಸತ್ತಿನಲ್ಲಿ ಕಾಂಗ್ರೆಸ್‌ ಸಂಸದರೊಬ್ಬರು ಕೇಳಿದ್ದ ಪ್ರಶ್ನೆಗೆ ಡಿ.8ರಂದು ಉತ್ತರಿಸಿದ ಸಚಿವರ ಹೆಸರನ್ನು ಸರಿಪಡಿಸಿ ವಿದೇಶಾಂಗ ಸಚಿವಾಲಯ ಸೋಮವಾರ ಲೋಕಸಭೆಯಲ್ಲಿ ಹೇಳಿಕೆ ನೀಡಿದೆ.

‘ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸುವ ಕುರಿತು ಲೋಕಸಭೆಯಲ್ಲಿ ಕೇಳಿದ್ದ ಪ್ರಶ್ನೆಯನ್ನು ನಾನು ಅನುಮೋದಿಸಿಲ್ಲ. ಕಡತಕ್ಕೆ ಸಹಿ ಹಾಕಿಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಹೇಳಿದ ನಂತರ ಡಿ.9 ರಂದು ರಾಜಕೀಯ ಗದ್ದಲ ಉಂಟಾಗಿತ್ತು. ಈ ಬೆಳವಣಿಗೆಯ ನಂತರ ಸರ್ಕಾರ, ಇದೊಂದು ‘ತಾಂತ್ರಿಕ ದೋಷ’. ಇದನ್ನು ಸರಿಪಡಿಸಲಾಗುವುದು ಎಂಬ ಸ್ಪಷ್ಟನೆ ನೀಡಿತ್ತು. 

ವಿದೇಶಾಂಗ ಖಾತೆಯ ಮತ್ತೊಬ್ಬ ರಾಜ್ಯ ಸಚಿವ ಮುರಳೀಧರನ್ ಅವರು ಸದನದಲ್ಲಿ ಈ ಬಗ್ಗೆ ಸೋಮವಾರ ಹೇಳಿಕೆ ನೀಡಿದ್ದಾರೆ. ‌‘ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸುವ ಕುರಿತು ಸಂಸದ ಕುಂಬಕುಡಿ ಸುಧಾಕರನ್ ಡಿ.8ರಂದು ಕೇಳಿದ್ದ ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ 980ಕ್ಕೆ ನೀಡಿದ ಉತ್ತರ ಸರಿಪಡಿಸಲಾಗಿದೆ. ಇದನ್ನು ಪೂರಕ ಕಾರ್ಯಸೂಚಿಯಲ್ಲಿ ಸೇರಿಸಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.  

ADVERTISEMENT

ಚುಕ್ಕೆ ಪ್ರಶ್ನೆಗಳಿಗೆ ಸಚಿವರು ಸದನದಲ್ಲಿ ಮೌಖಿಕ ಉತ್ತರ ನೀಡುತ್ತಾರೆ. ಚುಕ್ಕೆ ರಹಿತ ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.