ADVERTISEMENT

ಭಾರತ, ಸಿಂಗಾಪುರ ನಡುವೆ ಬಿರುಕು ಮೂಡಿಸಲು ಯತ್ನಿಸಿದ್ದ ಕೇಜ್ರಿವಾಲ್: ಲೇಖಿ ಆರೋಪ

ಪಿಟಿಐ
Published 22 ಜುಲೈ 2022, 16:33 IST
Last Updated 22 ಜುಲೈ 2022, 16:33 IST
ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌
ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌   

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಭಾರತ ಹಾಗೂ ಸಿಂಗಾಪುರ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸಿದ್ದರು ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಗಂಭೀರ ಆರೋಪ ಮಾಡಿದ್ದಾರೆ.

ಆಗಸ್ಟ್‌ 1ರಂದು ಸಿಂಗಪುರದಲ್ಲಿ ನಡೆಯಲಿರುವ ವಿಶ್ವ ನಗರಗಳ ಸಮ್ಮೇಳನದಲ್ಲಿ ಕೇಜ್ರಿವಾಲ್‌ ಅವರುಪಾಲ್ಗೊಳ್ಳಲು ಅನುಮತಿ ಕೋರಿ ದೆಹಲಿ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ತಿರಸ್ಕರಿಸಿದ್ದಾರೆ. 'ಸಮ್ಮೇಳನವು ಮೇಯರ್‌ಗಳಿಗೆ ಸಂಬಂಧಿಸಿದ್ದು. ಮುಖ್ಯಮಂತ್ರಿಯಾಗಿರುವ ನೀವು ಇದರಲ್ಲಿ ಪಾಲ್ಗೊಳ್ಳುವುದು ಸೂಕ್ತವಲ್ಲವೆಂದು ಕೇಜ್ರಿವಾಲ್‌ಗೆ ಲೆಫ್ಟಿನೆಂಟ್‌ ಗವರ್ನರ್‌ ಸಲಹೆ ನೀಡಿದ್ದಾರೆ’ ಎಂದು ವರದಿಯಾಗಿದೆ.ಆದರೆ, ಕೇಜ್ರಿವಾಲ್‌ ಪ್ರವಾಸವನ್ನು ತಡೆಯಲಾಗುತ್ತಿದೆ. ಇದರ ಹಿಂದೆ ರಾಜಕೀಯ ಹುನ್ನಾರವಿದೆ ಎಂದು ದೆಹಲಿ ಸರ್ಕಾರ ಆರೋಪಿಸಿದೆ.

ವಿದೇಶಾಂಗ ಸಚಿವಾಲಯದ ಮೂಲಕ ರಾಜಕೀಯ ಅನುಮತಿ ಪಡೆಯುವುದಾಗಿ ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ADVERTISEMENT

ನಗರದಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಈ ವಿವಾದಕ್ಕೆ ಸಂಬಂಧಿಸಿದಂತೆಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಲೇಖಿ, ಕೇಜ್ರಿವಾಲ್‌ ಅವರು ಸಿಂಗಾಪುರದಲ್ಲಿ ಪತ್ತೆಯಾಗಿರುವ ಕೋವಿಡ್‌–19 ವೈರಸ್‌ನ ಹೊಸ ತಳಿಯು ಮಕ್ಕಳಿಗೆ ಅಪಾಯಕಾರಿ ಎಂದು ಈ ಹಿಂದೆ ಟ್ವೀಟ್ ಮಾಡಿದ್ದರು. ಆಮೂಲಕ ಉಭಯ ದೇಶಗಳ ಸಂಬಂಧ ಹಾಳು ಮಾಡಲು ಪ್ರಯತ್ನಿಸಿದ್ದರು. ಅವರನ್ನು (ಅರವಿಂದಕೇಜ್ರಿವಾಲ್‌) ತರಾಟೆಗೆ ತೆಗೆದುಕೊಂಡಿದ್ದಸಿಂಗಾಪುರ ಸರ್ಕಾರ, ರಾಜಕಾರಣಿಗಳು ವಾಸ್ತವಗಳನ್ನು ಗಮನಿಸಬೇಕು. ಸಿಂಗಾಪುರದಲ್ಲಿ ಯಾವುದೇ ಹೊಸ ತಳಿ ಪತ್ತೆಯಾಗಿಲ್ಲ ಎಂದು ಪ್ರಕಟಿಸಿತ್ತು ಎಂದಿದ್ದಾರೆ.

'ಇದು ಈ ವ್ಯಕ್ತಿಯ ಇತಿಹಾಸ. ಸಿಂಗಾಪುರದ ಬಗ್ಗೆ ಅವರು ಈ ಹಿಂದೆ ಟ್ವೀಟ್ ಮಾಡಿದ್ದು ಹೀಗೆ. ಮಿತ್ರ ರಾಷ್ಟ್ರಗಳಾದ ಭಾರತ ಮತ್ತು ಸಿಂಗಾಪುರದ ನಡುವೆ ಬಿಕ್ಕಟ್ಟು ಸೃಷ್ಟಿಸಲು ಅವರು ಪ್ರಯತ್ನಿಸಿದ್ದು ಹೀಗೆ' ಎಂದು ಕಿಡಿಕಾರಿದ್ದಾರೆ.

ಕಳೆದ ವರ್ಷ ಮೇ 18ರಂದು ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದ ಕೇಜ್ರಿವಾಲ್‌, ಸಿಂಗಾಪುರದಲ್ಲಿ ಪತ್ತೆಯಾಗಿರುವ ಕೊರೊನಾವೈರಸ್‌ನ ಹೊಸ ರೂಪಾಂತರಿ ತಳಿ ಮಕ್ಕಳಿಗೆ ಅತ್ಯಂತ ಅಪಾಯಕಾರಿ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಇದು ಮೂರನೇ ಅಲೆಯಾಗಿ ಬರಬಹುದು. ಸಿಂಗಾಪುರದೊಂದಿಗಿನ ವಾಯು ಸೇವೆಗಳನ್ನು ತಕ್ಷಣವೇ ನಿರ್ಬಂಧಿಸಿ ಎಂದು ಒತ್ತಾಯಿಸಿದ್ದರು.

ಇದು ಆಧಾರ ರಹಿತವಾದ ಹೇಳಿಕೆ ಎಂದುಸಿಂಗಾಪುರ ವಿದೇಶಾಂಗ ಸಚಿವಾಲಯಪ್ರತಿಕ್ರಿಯಿಸಿತ್ತು. ಬಳಿಕ ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ದೆಹಲಿ ಮುಖ್ಯಮಂತ್ರಿಯು ಭಾರತದ ಪರವಾಗಿ ಮಾತನಾಡುವುದು ಬೇಡ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.