ADVERTISEMENT

ಮಳೆಯಲ್ಲಿ ಮ್ಯಾನ್‌ಹೋಲ್‌ ಬಳಿ ಜನರ ಎಚ್ಚರಿಸುತ್ತಿದ್ದ ಮಹಿಳೆಗೆ ಪ್ರಶಂಸೆಯ ಸುರಿಮಳೆ

ಏಜೆನ್ಸೀಸ್
Published 10 ಆಗಸ್ಟ್ 2020, 14:26 IST
Last Updated 10 ಆಗಸ್ಟ್ 2020, 14:26 IST
ಮ್ಯಾನ್‌ಹೋಲ್‌ ಬಳಿ ನಿಂತಿರುವ ಮಹಿಳೆ
ಮ್ಯಾನ್‌ಹೋಲ್‌ ಬಳಿ ನಿಂತಿರುವ ಮಹಿಳೆ   

ಮುಂಬೈ: ಸುರಿವ ಮಳೆ, ರಸ್ತೆಯಲ್ಲಿ ಮ್ಯಾನ್‌ ಹೋಲ್‌ ಬಳಿ ನಿಂತು ಈ ಕಡೆ ಬರಬೇಡಿ ಎಂದು ವಾಹನ ಸವಾರರಿಗೆ ಸನ್ನೆ ಮಾಡುತ್ತ ಮಹಾನಗರ ಪಾಲಿಕೆ ಸಿಬ್ಬಂದಿ ಬರುವವರೆಗೂ ಅಲ್ಲಿಯೇ ಇದ್ದ ಆ ಮಧ್ಯ ವಯಸ್ಕ ಮಹಿಳೆಯ ಬಗ್ಗೆ ಮುಂಬೈ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಹೂ ಮಾರಿ ಜೀವನ ಸಾಗಿಸುವ ಕಾಂತಾ ಮೂರ್ತಿ ಸುರಿಯುವ ಮಳೆಯನ್ನು ಲೆಕ್ಕಿಸದೇ, ತನ್ನ ಪ್ರಾಣದ ಹಂಗು ತೊರೆದು ಮ್ಯಾನ್‌ಹೋಲ್‌ ಬಳಿ 7 ಗಂಟೆಗಳ ನಿಂತು ಸಂಭವಿಸಬಹುದಾದ ಪ್ರಾಣ ಹಾನಿಯನ್ನು ತಪ್ಪಿಸಿದ್ದಾರೆ. ಸುರಿಯವ ಮಳೆ, ರಸ್ತೆಯಲ್ಲಿ ಹರಿವ ನೀರಿನ ನಡುವೆ ವಾಹನ ಸವಾರರಿಗೆ ಹಾಗೂ ಪಾದಾಚಾರಿಗಳಿಗೆ ಈ ಕಡೆ ಬರಬೇಡಿ ಎಂದು ಸನ್ನೆ ಮಾಡುತ್ತ ಸಂಚಾರಿ ಪೊಲೀಸರ ಮಾದರಿಯಲ್ಲಿ ಕೆಲಸ ಮಾಡುವುದನ್ನು ಕೆಲವರು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊವನ್ನು ಅಪ್‌ಲೋಡ್‌ ಮಾಡಿದ್ದಾರೆ.

ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು ಮುಂಬೈ ಜನತೆ ಕಾಂತಾ ಮೂರ್ತಿಯವರ ಸಾಮಾಜಿಕ ಕಳಕಳಿ ಹಾಗೂ ಜೀವದ ಹಂಗು ತೊರೆದು ಕೆಲಸ ಮಾಡಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ADVERTISEMENT

ಕಳೆದೊಂದು ವಾರದಲ್ಲಿ ಮುಂಬೈ ಮಹಾನಗರ ವರುಣನ ಆರ್ಭಟಕ್ಕೆ ತೊಪ್ಪೆಯಾಗಿತ್ತು. ಇಲ್ಲಿನ ಮಟ್ಟಗಾಂವ್‌ ಪ್ರದೇಶದ ರಸ್ತೆಯೊಂದರಲ್ಲಿ ಮ್ಯಾನ್‌ಹೋಲ್‌ ಮುಚ್ಚುಳ ತುಂಡಾಗಿ ನೀರು ಹೊರಬರುತ್ತಿತ್ತು. ಇದನ್ನು ಗಮನಿಸಿದ ಕಾಂತಾ ಮೂರ್ತಿ ಮ್ಯಾನ್‌ ಹೋಲ್‌ ಬಳಿ ನಿಂತು ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದ್ದರು.ಇದನ್ನು ಗಮನಿಸಿದ ಕೆಲ ಪೊಲೀಸ್‌ ಅಧಿಕಾರಿಗಳು ಕಾಂತಾ ಮೂರ್ತಿಗೆ ಮನೆಗೆ ತೆರಳುವಂತೆ ಗದರಿಸಿದ್ದರು. ಯಾವುದಕ್ಕೂ ಜಗ್ಗದೇ, 7 ಗಂಟೆಗಳ ನಂತರ ಪಾಲಿಕೆ ಸಿಬ್ಬಂದಿ ಬಂದ ಮೇಲೆ ಕಾಂತಾ ಮೂರ್ತಿ ಆ ಸ್ಥಳದಿಂದ ತೆರಳಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಬೀದಿ ಬದಿಯಲ್ಲಿ ಹೂ ಮಾರಾಟ ಮಾಡಿ ಜೀವನ ನಡೆಸುವ ಕಾಂತಾ ಮೂರ್ತಿಗೆ 8 ಜನ ಮಕ್ಕಳಿದ್ದಾರೆ. 5 ಜನರಿಗೆ ಮದುವೆ ಮಾಡಿದ್ದು ಇನ್ನು ಮೂವರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪಾರ್ಶ್ವವಾಯುಗೆ ತುತ್ತಾಗಿರುವ ಪತಿಯನ್ನು ನೋಡುವುದರ ಜತೆಗೆ ಮಕ್ಕಳ ವಿದ್ಯಾಭ್ಯಾಸ ಹೊರೆಯನ್ನು ನಿಭಾಯಿಸಬೇಕಾಗಿದೆ. ಹೂ ಮಾರಾಟದಿಂದಲೇ ನಮ್ಮ ಬದುಕಿನ ಬಂಡಿ ಸಾಗುತ್ತಿದೆ ಎಂದು ಕಾಂತಾ ಮೂರ್ತಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.