ಅಮೃತಸರ ಹೊರವಲಯದ ಕೃಷಿಭೂಮಿಯಲ್ಲಿ ಗುರುವಾರ ಲೋಹದ ಅವಶೇಷ ಪತ್ತೆಯಾಗಿದೆ
–ಪಿಟಿಐ ಚಿತ್ರ
ಅಮೃತಸರ: ನಗರದ ಹೊರವಲಯದಲ್ಲಿರುವ ಜೇಠುವಾಲ ಗ್ರಾಮದಲ್ಲಿ ಗುರುವಾರ ಲೋಹದ ಭಗ್ನಾವಶೇಷಗಳು ಪತ್ತೆಯಾಗಿವೆ. ಇವು ಕ್ಷಿಪಣಿಗಳ ಅವಶೇಷಗಳಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತ ನಡೆಸಿದ ಆಪರೇಷನ್ ಸಿಂಧೂರ ಬೆನ್ನಲ್ಲೇ ಈ ಅವಶೇಷ ಪತ್ತೆಯಾಗಿದೆ.
ಜೇಠೂವಾಲದ ಬಯಲು ಪ್ರದೇಶ ಹಾಗೂ ಕೆಲ ಮನೆಗಳ ಬಳಿ ಈ ಅವಶೇಷಗಳು ಪತ್ತೆಯಾಗಿವೆ. ಆಸ್ತಿಪಾಸ್ತಿಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಅವಶೇಷಗಳು ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ, ಪೊಲೀಸರು ಈ ಕುರಿತು ಸೇನೆಗೆ ಮಾಹಿತಿ ನೀಡಿದ್ದಾರೆ.
ಪತ್ತೆಯಾದ ವಸ್ತುಗಳು ಯಾವುವು ಎಂದು ತನಿಖೆಯ ಬಳಿಕವಷ್ಟೇ ಖಚಿತವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಮಧ್ಯೆ, ಅಮೃತಸರ ಜಿಲ್ಲಾಡಳಿತವು ಗುರುವಾರ ನಸುಕಿನಲ್ಲಿ ನಾಗರಿಕರ ಸ್ವರಕ್ಷಣಾ ತಾಲೀಮನ್ನೂ ನಡೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.