ADVERTISEMENT

ಮಾನನಷ್ಟ ಮೊಕದ್ದಮೆ: ಪರಸ್ಪರ ಒಪ್ಪಂದ ಸಾಧ್ಯವಿಲ್ಲ ಎಂದ ಪತ್ರಕರ್ತ ಅಕ್ಬರ್, ರಮಣಿ

ಪಿಟಿಐ
Published 24 ನವೆಂಬರ್ 2020, 16:03 IST
Last Updated 24 ನವೆಂಬರ್ 2020, 16:03 IST
ಎಂ.ಜೆ.ಅಕ್ಬರ್‌
ಎಂ.ಜೆ.ಅಕ್ಬರ್‌   

ನವದೆಹಲಿ: ಪರಸ್ಪರ ಒಪ‍್ಪಂದದ ಮೂಲಕ ಮಾನನಷ್ಟ ಮೊಕದ್ದಮೆಯ ಪರಿಹಾರದ ಆಯ್ಕೆಯನ್ನು ಪತ್ರಕರ್ತೆ ಪ್ರಿಯಾ ರಮಣಿ ಹಾಗೂ ಕೇಂದ್ರದ ಮಾಜಿ ಸಚಿವ ಎಂ.ಜೆ.ಅಕ್ಬರ್‌ ತಿರಸ್ಕರಿಸಿದ್ದಾರೆ.

ದೇಶದಲ್ಲಿ 2018ರಲ್ಲಿ ‘ಮೀಟೂ’ ಅಭಿಯಾನ ಆರಂಭವಾಗಿದ್ದ ಸಂದರ್ಭದಲ್ಲಿ ಅಕ್ಬರ್‌ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ರಮಣಿ ಅವರು ಮಾಡಿದ್ದರು. ಈ ಆರೋಪಕ್ಕೆ ಪ್ರತಿಯಾಗಿ ರಮಣಿ ಅವರ ವಿರುದ್ಧ 2018 ಅ.15ರಂದು ಮಾನನಷ್ಟ ಮೊಕದ್ದಮೆಯನ್ನು ಅಕ್ಬರ್‌ ದಾಖಲಿಸಿದ್ದರು.

‘ತಾನು ಮಾಡಿದ ಆರೋಪಗಳಿಗೆ ರಮಣಿ ಅವರು ಕ್ಷಮೆ ಕೇಳಿದರೆ, ದೂರನ್ನು ಹಿಂಪಡೆಯುವ ಕುರಿತು ಅಕ್ಬರ್‌ ಅವರ ಜೊತೆ ಮಾತುಕತೆ ನಡೆಸುವುದಾಗಿ’ ಗೀತಾ ಅವರು ಮಂಗಳವಾರ ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರಮಣಿ ಅವರ ಪರ ವಕೀಲರಾದ ಭವೂಕ್‌ ಚೌಹಾಣ್‌, ‘ರಮಣಿ ಅವರು ತಮ್ಮ ಹೇಳಿಕೆಗೆ ಬದ್ಧರಾಗಿದ್ದಾರೆ. ದೂರನ್ನು ಅಕ್ಬರ್‌ ಅವರು ಹಿಂಪಡೆಯುವುದಾದರೆ, ಪಡೆಯಬಹುದು’ ಎಂದು ಹೇಳಿದರು.

ADVERTISEMENT

ಇತ್ತೀಚೆಗೆ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌(ಎಸಿಎಂಎಂ) ರವೀಂದ್ರ ಕುಮಾರ್‌ ಪಾಂಡೆ ಅವರು, ವ್ಯಾಜ್ಯ ಅಂತ್ಯಗೊಳಿಸಲು ಸಾಧ್ಯತೆ ಇದೆಯೇ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಅಕ್ಬರ್‌ ಅವರ ಪರ ವಕೀಲರಾದ ಗೀತಾ ಲುಥ್ರಾ, ಈ ವಿಷಯದ ಕುರಿತಾಗಿ ಅಂತಿಮ ತೀರ್ಮಾನ ಕೈಗೊಳ್ಳುವ ಮೊದಲು ತನ್ನ ಕಕ್ಷಿದಾರರ ಜೊತೆ ಮಾತನಾಡಬೇಕು ಎಂದು ಹಿಂದಿನ ವಿಚಾರಣೆ ವೇಳೆ ತಿಳಿಸಿದ್ದರು.

ಪತ್ರಕರ್ತರಾಗಿ ಅಕ್ಬರ್‌ ಅವರ ಜೊತೆ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು 20ಕ್ಕೂ ಅಧಿಕ ಮಹಿಳೆಯರು ಮೀಟೂ ಅಭಿಯಾನದ ವೇಳೆ ಅವರ ವಿರುದ್ಧ ಆರೋಪ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.