ADVERTISEMENT

ಬಿಜೆಪಿಯ ದಮನಕಾರಿ ನೀತಿಗಳಿಗೆ ನರೇಗಾ ಯೋಜನೆ ಬಲಿ: ರಾಹುಲ್ ಗಾಂಧಿ

ಪಿಟಿಐ
Published 17 ಫೆಬ್ರುವರಿ 2023, 16:07 IST
Last Updated 17 ಫೆಬ್ರುವರಿ 2023, 16:07 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು (ನರೇಗಾ) ಕೇಂದ್ರದ ಬಿಜೆಪಿ ಸರ್ಕಾರದ ದಮನಕಾರಿ ನೀತಿಗಳಿಗೆ ಬಲಿಯಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ನರೇಗಾ ಯೋಜನೆಗೆ ಬಜೆಟ್ ಅನುದಾನ ಕಡಿತಗೊಳಿಸಿರುವುದಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.

ನರೇಗಾ ಯೋಜನೆ ದೇಶದ ಗ್ರಾಮೀಣ ಆರ್ಥಿಕತೆಯ ಅಡಿಪಾಯವಾಗಿದೆ. ಅಸಂಖ್ಯಾತ ಕುಟುಂಬಗಳಿಗೆ ಬೆಂಬಲ ನೀಡಿದ ಕ್ರಾಂತಿಕಾರಿ ಯೋಜನೆ ಇದಾಗಿದೆ. ಹೀಗೆ ಕೋಟ್ಯಂತರ ಮನೆಗಳಿಗೆ ಜೀವನೋಪಾಯ ಆಗಿರುವ ನರೇಗಾ ಯೋಜನೆಯು, ಕೇಂದ್ರದ ದಮನಕಾರಿ ನೀತಿಗಳಿಗೆ ಬಲಿಯಾಗುತ್ತಿದೆ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ರಾಹುಲ್ ಬರೆದುಕೊಂಡಿದ್ದಾರೆ.

ನರೇಗಾ ಯೋಜನೆಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದರೆ ಶೇ 57ರಷ್ಟು ಗ್ರಾಮೀಣ ಕಾರ್ಮಿಕರು ದೈನಂದಿನ ಕೂಲಿಯನ್ನು ಕಳೆದುಕೊಳ್ಳಲಿದ್ದಾರೆ. ಹೊಸ ಉದ್ಯೋಗ ಸೃಷ್ಟಿಸುವ ಯಾವುದೇ ನೀತಿ ಸರ್ಕಾರ ಹೊಂದಿಲ್ಲ. ಉದ್ಯೋಗವನ್ನು ಕಸಿದುಕೊಳ್ಳುವುದೇ ಈ ಸರ್ಕಾರದ ಉದ್ದೇಶವಾಗಿದೆ. ಈ ಮೂಲಕ ಜನರಿಗೆ ಹೆಚ್ಚಿನ ತೊಂದರೆ ನೀಡುತ್ತಿದೆ ಎಂದು ಆರೋಪಿಸಿದರು.

ಪ್ರಧಾನಿಯನ್ನು ಬಡವರು ಕ್ಷಮಿಸುವುದಿಲ್ಲ: ಖರ್ಗೆ
ಪ್ರಧಾನಿ ಅವರೇ ನರೇಗಾ ಯೋಜನೆಯನ್ನು ಕೊನೆಗಾಣಿಸಬೇಡಿ. ಜನರು ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಸಿದ್ದಾರೆ.

ಮೋದಿ ಸರ್ಕಾರ ನರೇಗಾ ಮೇಲೆ ಕೊಡಲಿ ಏಟು ಮಾಡಿದೆ. ಬಜೆಟ್‌ನಲ್ಲಿ ನರೇಗಾ ನಿಧಿ ಶೇ 3ರಷ್ಟು ಕಡಿತಗೊಳಿಸಲಾಗಿದೆ. ನರೇಗಾ ಉದ್ಯೋಗ ನೀಡುವ ಯೋಜನೆ ಅಲ್ಲ ಎಂದು ಸಚಿವರು ಹೇಳುತ್ತಾರೆ. ಕೇಂದ್ರದ ಶೇ 100ರ ಕೆಲಸಕ್ಕೆ ರಾಜ್ಯಗಳು ಶೇ 40ರಷ್ಟು ಪಾವತಿಸಬೇಕಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.