ADVERTISEMENT

ರಾಜ್ಯದಲ್ಲಿ ಸೋಂಕು ಪ್ರಕರಣ ಹೆಚ್ಚಾಗಲು ವಲಸೆ ಕಾರ್ಮಿಕರೇ ಕಾರಣ: ಎಂಎನ್‌ಎಸ್

ಪಿಟಿಐ
Published 6 ಏಪ್ರಿಲ್ 2021, 14:11 IST
Last Updated 6 ಏಪ್ರಿಲ್ 2021, 14:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ ಕೆಲವು ವಾರಗಳಿಂದ ಹೆಚ್ಚಿನ ಸಂಖ್ಯೆಯ ಹೊಸ ಸೋಂಕು ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ, ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ವ್ಯಾಪಿಸಲು ಇತರ ರಾಜ್ಯಗಳ ವಲಸೆ ಕಾರ್ಮಿಕರು ಕಾರಣ ಎಂದು ಎಂಎನ್‌ಎಸ್ (ಮಹಾರಾಷ್ಟ್ರ ನವನಿರ್ಮಾಣ ಸೇನೆ) ಮುಖ್ಯಸ್ಥ ರಾಜ್ ಠಾಕ್ರೆ ಮಂಗಳವಾರ ಹೇಳಿದ್ದಾರೆ.

ಕೊರೊನಾ ವೈರಸ್‌ ಸೋಂಕು ಪರೀಕ್ಷೆ ನಡೆಸಲು ಪೂರಕ ಸೌಲಭ್ಯಗಳು ಇಲ್ಲದ ರಾಜ್ಯಗಳಿಂದ ವಲಸೆ ಕಾರ್ಮಿಕರು ಬಂದಿದ್ದಾರೆ. 'ಮಹಾರಾಷ್ಟ್ರವು ಭಾರತದ ಅತ್ಯಂತ ಕೈಗಾರಿಕೀಕರಣಗೊಂಡ ರಾಜ್ಯವಾಗಿದ್ದು, ಇತರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ಕಾರ್ಮಿಕರನ್ನು ಆಕರ್ಷಿಸುತ್ತದೆ. ಈ ಕಾರ್ಮಿಕರು ಬರುವ ಸ್ಥಳಗಳಲ್ಲಿ ಅಗತ್ಯ ಪರೀಕ್ಷಾ ಸೌಲಭ್ಯಗಳಿರುವುದಿಲ್ಲ' ಎಂದು ದೂರಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ವರ್ಚುಯಲ್ ಸಂವಾದದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕಳೆದ ವರ್ಷದ ಲಾಕ್‌ಡೌನ್ ಸಮಯದಲ್ಲಿ, ತಮ್ಮ ತಮ್ಮ ಸ್ಥಳಗಳಿಗೆ ಮರಳಿದ ವಲಸೆ ಕಾರ್ಮಿಕರನ್ನು ಪರೀಕ್ಷಿಸಬೇಕೆಂದು ನಾನು ಸೂಚಿಸಿದ್ದೆ, ಆದರೆ ಅದನ್ನು ಮಾಡಿಲ್ಲ' ಎಂದು ತಿಳಿಸಿದರು.

ADVERTISEMENT

ಕ್ರೀಡಾಪಟುಗಳಿಗೆ ಅಭ್ಯಾಸ ನಡೆಸಲು ಅವಕಾಶ ನೀಡುವಂತೆ ಮತ್ತು ಜಿಮ್‌ಗಳನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯನಿರ್ವಹಿಸಲು ಅನುಮತಿ ನೀಡುವಂತೆ ಸಿಎಂಗೆ ಕೇಳಿಕೊಂಡಿರುವುದಾಗಿ ರಾಜ್ ಠಾಕ್ರೆ ತಿಳಿಸಿದರು.

ಸೋಮವಾರ ರಾತ್ರಿಯಿಂದ ಮಹಾರಾಷ್ಟ್ರದಲ್ಲಿ ವಿಧಿಸಲಾಗಿರುವ ಹೊಸ ನಿರ್ಬಂಧಗಳ ಕುರಿತು ಮಾತನಾಡಿದ ಎಂಎನ್‌ಎಸ್ ಅಧ್ಯಕ್ಷ, ಈ ಅವಧಿಯಲ್ಲಿ ಎಲ್ಲಾ ಅಂಗಡಿಗಳನ್ನು ಕನಿಷ್ಠ ಎರಡು ಅಥವಾ ಮೂರು ದಿನಗಳವರೆಗೆ ತೆರೆದಿಡಬೇಕು ಎಂದು ಹೇಳಿದರು.

ರಾಜ್ಯ ಸರ್ಕಾರ ಭಾನುವಾರ ಘೋಷಿಸಿರುವ ನಿರ್ಬಂಧಗಳ ಪ್ರಕಾರ, ಅಗತ್ಯ ಸೇವೆಗಳ ಅಂಗಡಿಗಳು, ವೈದ್ಯಕೀಯ ಅಂಗಡಿಗಳು ಮತ್ತು ದಿನಸಿ ಅಂಗಡಿಗಳನ್ನು ಹೊರತುಪಡಿಸಿ, ಇತರ ಎಲ್ಲ ಅಂಗಡಿಗಳು, ಮಾರುಕಟ್ಟೆಗಳು ಮತ್ತು ಶಾಪಿಂಗ್ ಮಾಲ್‌ಗಳನ್ನು ಮಹಾರಾಷ್ಟ್ರದಲ್ಲಿ ಏಪ್ರಿಲ್ 30 ರವರೆಗೆ ಮುಚ್ಚಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.