ಐಜ್ವಾಲ್: ಅಂತರರಾಜ್ಯ ಗಡಿ ವಿವಾದವನ್ನು ಸೌಹಾರ್ದಯುತ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಮಿಜೋರಾಂ ಮತ್ತು ಅಸ್ಸಾಂ ಸರ್ಕಾರಗಳು ಗುರುವಾರ ನಿರ್ಧರಿಸಿವೆ.
ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಮಿಜೋರಾಂ ರಾಜ್ಯಕ್ಕೆ ಪ್ರಯಾಣಿಸುವ ಕುರಿತಂತೆ ರಾಜ್ಯವಾಸಿಗಳಿಗೆ ನೀಡಲಾಗಿದ್ದ ಸಲಹಾ ಸೂಚನೆಯನ್ನು ಹಿಂಪಡೆಯಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ.
ಅಂತರ ರಾಜ್ಯ ಗಡಿಯಲ್ಲಿ ಶಾಂತಿಯುತ ಸ್ಥಿತಿಯನ್ನು ಕಾಯ್ದುಕೊಳ್ಳಲು ಉಭಯ ರಾಜ್ಯಗಳು ಸಮ್ಮತಿಸಿದ್ದು, ಪೂರಕವಾಗಿ ಗಡಿ ಭಾಗಕ್ಕೆ ತಟಸ್ಥ ಪಡೆಗಳನ್ನುನ್ನು ನಿಯೋಜಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿವೆ.
ಈ ಬಗ್ಗೆ ಅಸ್ಸಾಂನ ಗಡಿಭದ್ರತೆ ಮತ್ತು ಅಭಿವೃದ್ಧಿ ಖಾತೆ ಸಚಿವ ಅತುಲ್ ಬೋರಾ, ಇಲಾಖೆಯ ಆಯುಕ್ತ ಜಿ.ಡಿ.ತ್ರಿಪಾಠಿ ಹಾಗೂ ಮಿಜೋರಾಂನ ಗೃಹ ಸಚಿವ ಲಾಲ್ಚಂ ಲಿಯಾನಾ ಮತ್ತು ಗೃಹ ಕಾರ್ಯದರ್ಶಿ ವನಲಾಲ್ಗತಸ್ಕಾ ಜಂಟಿ ಹೇಳಿಕೆ ನೀಡಿದ್ದಾರೆ.
ಗಡಿ ಕಾಯಲು ಉಭಯ ರಾಜ್ಯಗಳು ತಮ್ಮ ಅರಣ್ಯ ಮತ್ತು ಪೊಲೀಸ್ ಪಡೆಗಳನ್ನು ನಯೋಜಿಸಬಾರದು. ಸಂಘರ್ಷಕ್ಕೆ ಅವಕಾಶ ಕಲ್ಪಿಸಬಾರದು. ಅಸ್ಸಾಂ–ಮಿಜೋರಾಂ ಗಡಿಭಾಗದ ಜಿಲ್ಲೆಗಳಾದ ಅಸ್ಸಾಂನ ಕರೀಂಗಂಜ್, ಹೈಲಾಕಂಡಿ ಮತ್ತು ಕಚಾರ್ ಹಾಗೂ ಮಿಜೋರಾಂನ ಮಮಿತ್ ಮತ್ತು ಕೊಲಸಿಬ್ ಜಿಲ್ಲೆಗಳಿಗೆ ಅನ್ವಯವಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.