ನವದೆಹಲಿ: ಅನ್ಲಾಕ್-1 ಸಂದರ್ಭದಲ್ಲಿ ಹಲವು ನಿರ್ಬಂಧಗಳನ್ನು ಸಡಿಲಗೊಳಿಸಿದ ಕಾರಣ ಆರ್ಥಿಕತೆ ಚೇತರಿಕೆ ಕಂಡಿದ್ದು, ಅನ್ಲಾಕ್ 2.0 ಬಗ್ಗೆ ಯೋಚಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳಿಗೆ ಹೇಳಿದರು.
ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ ಸೇರಿದಂತೆ 14 ರಾಜ್ಯಗಳ ಮುಖ್ಯಮಂತ್ರಿಗಳ ವಿಡಿಯೊ ಸಂವಾದ ನಡೆಸಿದ ಮೋದಿ,‘ಮತ್ತೆ ಲಾಕ್ಡೌನ್ ಘೋಷಿಸಲಾಗುತ್ತದೆ ಎನ್ನುವ ವದಂತಿಯ ವಿರುದ್ಧ ಇದೀಗ ಹೋರಾಡಬೇಕಾಗಿದೆ. ನಾವೀಗ ನಿರ್ಬಂಧಗಳಿಂದ ಹೊರಬರುವ ಹಂತದಲ್ಲಿ ಇದ್ದೇವೆ. ಜನರಿಗೆ ಹಾನಿಯಾಗದಂತೆ ಯಾವ ರೀತಿ ಅನ್ಲಾಕ್ 2.0 ಅನುಷ್ಠಾನಕ್ಕೆ ತರಬಹುದು ಎನ್ನುವುದರ ಬಗ್ಗೆ ಯೋಚಿಸಬೇಕಾಗಿದೆ’ ಎಂದಿದ್ದಾರೆ.
‘ಜನದಟ್ಟಣೆ, ಪರಸ್ಪರ ಅಂತರ ಕಾಯ್ದುಕೊಳ್ಳಲು ವಿಫಲತೆ, ನಿತ್ಯ ಲಕ್ಷಾಂತರ ಜನರ ಓಡಾಟ, ಕೆಲ ನಗರಗಳಲ್ಲಿ ಇರುವ ಸಣ್ಣ ಸಣ್ಣ ಮನೆಗಳು ಕೊರೊನಾ ವಿರುದ್ಧ ಹೋರಾಟವನ್ನು ಮತ್ತಷ್ಟು ಸವಾಲಾಗಿಸಿದೆ’ ಎಂದರು.
ಬೃಹತ್ ನಗರಗಳಲ್ಲಿ ಕೋವಿಡ್–19 ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಅಂಥ ರಾಜ್ಯಗಳಲ್ಲಿ ಕೋವಿಡ್ ಪರೀಕ್ಷಾ ಸಾಮರ್ಥ್ಯವನ್ನು ಪೂರ್ಣವಾಗಿ ಬಳಸಿಕೊಳ್ಳಬೇಕು ಹಾಗೂ ಆರೋಗ್ಯ ಮೂಲಸೌಕರ್ಯವನ್ನು ವೃದ್ಧಿಪಡಿಸಬೇಕು ಎಂದು ಮೋದಿ ಕಿವಿಮಾತು ಹೇಳಿದರು.
ಜನರ ಜೀವವನ್ನು ರಕ್ಷಿಸುವುದಕ್ಕೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಮೂಲಸೌಕರ್ಯವನ್ನು ವೃದ್ಧಿಸಬೇಕು ಎಂದು ತಿಳಿಸಿದರು ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.